ರಾಮನಗರ: ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣುಮಕ್ಕಳಿಂದು ರಾಷ್ಟ್ರಪತಿ, ಪ್ರಧಾನಿಯಂತಹ ಮಹೋನ್ನತ ಹುದ್ದೆ ಅಲಂಕರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ನಾವು ಪುರುಷರನ್ನು ದ್ವೇಷಿಸದೆ ಅವರ ಸಹಕಾರ ಪಡೆದರೆ ಮತ್ತಷ್ಟು ಸಾಧನೆಗೆ ಶಕ್ತಿ ದೊರೆಯುತ್ತದೆ ಎಂದು ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕಿ ಸೌಮ್ಯ ಕುಮಾರಸ್ವಾಮಿ ಹೇಳಿದರು.
ಯಾವ ಮನೆಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವಿರುತ್ತದೋ ಅಲ್ಲಿ ಹೆಣ್ಣಿನ ಸ್ಥಾನ ಶ್ರೇಷ್ಠ ಮಟ್ಟದಲ್ಲಿರುತ್ತದೆ. ಮಹಿಳೆಯರು ಎಲ್ಲಾ ರಂಗದಲ್ಲೂ ಪಾದಾರ್ಪಣೆ ಮಾಡುವಂತೆ ಮಾಡಿದೆ. ಶಿಕ್ಷಣ ಪಡೆದ ಹೆಣ್ಣು ಸಮಾಜದಲ್ಲಿ ಶಕ್ತಿಶಾಲಿಯಾಗಿ ಬೆಳೆದು ಸಾಧನೆ ಹಾದಿಯಲ್ಲಿ ಸಾಗುತ್ತಾಳೆ. ಹೆಣ್ಣಾಗಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ ನಾವೆಲ್ಲರೂ ಅದಕ್ಕಾಗಿ ಹೆಮ್ಮೆ ಪಡಬೇಕು. ಹೆಣ್ಣು ಮನಸ್ಸು ಮಾಡಿದರೆ ಹೆಣ್ಣು ಏನನನ್ನಾದರೂ ಸಾಧಿಸಿ ತೋರಬಲ್ಲಳು ಎಂದು ಸೌಮ್ಯ ಕುಮಾರಸ್ವಾಮಿ ತಿಳಿಸಿದರು.
ಮಾತಾ ಶಾರದಾಶ್ರಮ ಅಧ್ಯಕ್ಷೆ ಮಾತಾ ಜೋತ್ಸ್ನಾಮಹಿ ಮಾತನಾಡಿ, ನಾವು ಅಂದುಕೊಂಡದ್ದನ್ನು ಸಾಧಿಸಲು ಗುರಿ ಇರಬೇಕು. ಆದರೆ, ನಾವು ಗುರಿಯಿಂದ ಹಿಂದೆ ಸರಿಯಬಾರದು. ತಮ್ಮ ಸಾಧನೆಗಳ ಮೂಲಕವೇ ಹಲವಾರು ಮಹಿಳೆಯರು ಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಸಾಧಕಿಯ ಸಾಧನೆಗಳು ನಮಗೆ ಸ್ಪೂರ್ತಿಯಾಗಬೇಕು ಎಂದರು.ಸಾಂಸ್ಕೃತಿಕ ಸಂಘಟಕಿ ಕವಿತಾರಾವ್ ಮಾತನಾಡಿ, ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಎಲ್ಲಾ ರಂಗದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ತಮ್ಮಲ್ಲಿ ಪ್ರತಿಭೆ, ಗುರಿ, ಅವಕಾಶಗಳಿದ್ದರೂ ಇನ್ನೂ ಹಲವಾರು ಮಹಿಳೆಯರು ಸಾಧನೆ ಹಾದಿ ತುಳಿಯುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯೂ ಗುರಿ ಸಾಧನೆಯಡೆಗೆ ದಾಪುಗಾಲು ಇಡಬೇಕು. ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸಬೇಕು ಎಂಬ ಪರಿಕಲ್ಪನೆಯಲ್ಲಿ ಮಹಿಳಾ ಸಮನ್ವಯ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಜನ ಕಲ್ಯಾಣ ಟ್ರಸ್ಟ್ ನಾರಿಶಕ್ತಿ ಸಂಗಮ ಹೆಸರಿನಲ್ಲಿ ಮಹಿಳಾ ಸಮಾವೇಶದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ರೈತ ಹೋರಾಟಗಾರ್ತಿ ಅನುಸೂಯಮ್ಮ, ಸಮಿತಿ ಉಪಾಧ್ಯಕ್ಷೆ ಚಿತ್ರಾ ಲಿಂಗೇಶ್ಕುಮಾರ್, ಸಹ ಕಾರ್ಯದರ್ಶಿ ರಾಜೇಶ್ವರಿ, ಕಾರ್ಯದರ್ಶಿ ಲತಾ, ಸದಸ್ಯರಾದ ಯಶೋಧಾ, ಪ್ರಮಾ, ಶಾರದಮ್ಮ, ಭಾಗ್ಯಲಕ್ಷ್ಮೀ, ಸರಸ್ವತಿ, ಸಹನಾ, ವರಲಕ್ಷ್ಮೀ, ಪ್ರಿಯಾ, ಶಿಲ್ಪಾ, ಝಾನ್ಸಿರಾಣಿ ಸುಧಾರಾಣಿ, ವೀಣಾ ಉಪಸ್ಥಿತರಿದ್ದರು.17ಕೆಆರ್ ಎಂಎನ್ 6.ಜೆಪಿಜಿ