ಗದಗ: ಚಿತ್ರಕಲೆ ಮನುಷ್ಯನಷ್ಟೇ ಪ್ರಾಚೀನವಾದುದು. ಭಾಷೆ, ದೇಶ, ಗಡಿಗಳನ್ನು ಮೀರಿ ಜನಮನ ಬೆಸೆಯುವ ಶಕ್ತಿ ಚಿತ್ರಕಲೆಗಿದೆ.ರಾಜ್ಯದಲ್ಲಿಯೇ ಹೆಚ್ಚು ಚಿತ್ರಕಲಾ ಮಹಾವಿದ್ಯಾಲಯಗಳನ್ನು ಹೊಂದಿದ ಗದಗ ಚಿತ್ರಕಲಾ ಕ್ಷೇತಕ್ಕೆ ಗಣನೀಯ ಕೊಡುಗೆ ನೀಡಿದೆ ಎಂದು ವಿದ್ಯಾದಾನ ಸಮಿತಿಯ ಜೆ.ಎನ್. ಕಲಾ ಮಹಾವಿದ್ಯಾಲಯದ ಪ್ರಾ.ಡಾ. ಬಿ.ಎಲ್. ಚವ್ಹಾಣ ಹೇಳಿದರು.
ಅಮೀನಸಾಬ್ ಕಮಡೊಳ್ಳಿ, ಸಿ.ಎನ್.ಪಾಟೀಲ, ಟಿ.ಪಿ.ಅಕ್ಕಿ, ಎಂ.ಎ. ಚೆಟ್ಟಿ.ಎನ್.ಎ.ಹರ್ಲಾಪೂರ, ಎ.ಎ.ಶಿರಹಟ್ಟಿ, ವಸಂತ ಅಕ್ಕಿ, ಅಶೋಕ ಅಕ್ಕಿ. ಕೆ.ವಿ.ಕುಂದಗೋಳ ಮೊದಲಾದವರು ತಮ್ಮ ಕಲಾಕೃತಿಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಆರ್.ಡಿ. ಕಡ್ಲಿಕೊಪ್ಪ ಮಾತನಾಡಿ, ಚಿತ್ರಕಲಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಬೆಳೆಸಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವದು ಗದುಗಿನ ಹೆಮ್ಮೆಯಾಗಿದೆ. ಈ ಹಿನ್ನೆಲೆಯಲ್ಲಿ 50 ಸಾವಿರ ದತ್ತಿನಿಧಿಯಾಗಿ ಸ್ಥಾಪಿಸುವದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಗರದಲ್ಲಿರುವ ಎಂ.ಎ.ಚೆಟ್ಟಿ ಆರ್ಟ ಗ್ಯಾಲರಿಯನ್ನು ಸುಸಜ್ಜಿತವಾಗಿ ಇಟ್ಟು ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭೇಟಿ ನೀಡುವ ವಾತಾವರಣ ಇಲಾಖೆ ಮಾಡಬೇಕು. ಕಲಾವಿದರ ಚಿತ್ರ ಪ್ರದರ್ಶನ ನಿರಂತರವಾಗಿ ಏರ್ಪಡಿಸುವ ಮೂಲಕ ಈ ಭಾಗದ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಎ.ಐ ತಂತ್ರಜ್ಞಾನದ ಮೂಲಕ ಚಿತ್ರಗಳ ರಚನೆಯಾಗುತ್ತಿರುವ ಈ ಸಂದರ್ಭದಲ್ಲಿ ಕಲಾವಿದರು ಹೊಸ ಬದಲಾವಣೆ ಸ್ಪಂದಿಸಿ ತಮ್ಮ ಕಲಾಪ್ರತಿಭೆ ಮೆರೆಯುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದರು.