ಕನ್ನಡಪ್ರಭ ವಾರ್ತೆ ತರೀಕೆರೆ
ಗಮಕವು ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಾಕಾರವಾಗಿದೆ ಎಂದು ಗಮಕ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ಬಿ.ಎಚ್. ಕುಮಾರಸ್ವಾಮಿ ಹೇಳಿದರು.ಅವರು ತಾಲೂಕು ಗಮಕ ಸಾಹಿತ್ಯ ಪರಿಷತ್ ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢಶಾಲಾ ವಿಭಾಗ ವತಿಯಿಂದ ಶಾಲೆಯಲ್ಲಿ ಏರ್ಪಾಡಾಗಿದ್ದ ಪಠ್ಯಾಧಾರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಹಳೆಗನ್ನಡ ಪದ್ಯಗಳನ್ನು ಸಂಗೀತದ ಮೂಲಕ ಹೇಳಿದಾಗ ಕಿವಿಗೆ ಇಂಪಾಗಿರುತ್ತದೆ. ಇಂಥ ನಮ್ಮ ಪ್ರಾಚೀನ ಕಲೆಗಳನ್ನು ರೂಢಿಸಿಕೊಳ್ಳುವುದರಿಂದ ಕಾವ್ಯದ ಮಹತ್ವ ಅರಿತಂತಾಗುತ್ತದೆ. ಮಕ್ಕಳು ಶಿಸ್ತಿನ ಜೀವನ ನಡೆಸಬೇಕು. ವಿನಯವಂತರಗಿರಬೇಕು. ಶಿಕ್ಷಕರಿಗೆ ಗೌರವವನ್ನು ಕೊಡಬೇಕು ಎಂದು ಹೇಳಿದರು.ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಬಿ.ಎಸ್. ಭಗವಾನ್ ಮಾತನಾಡಿ ಭಗವದ್ಗೀತೆ, ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಡಕವಾಗಿರುವ ಧರ್ಮ ಅಧರ್ಮಗಳ ಬಗ್ಗೆ ಶ್ರೀಕೃಷ್ಣ ಹೇಳಿರುವಂತ ಬೋಧನೆಗಳನ್ನು ಮಕ್ಕಳು ತಿಳಿದಿರಬೇಕು. ಕನ್ನಡ ರಾಜ್ಯೋತ್ಸವದ ಈ ಸುಸಂಧರ್ಭದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಸೇವೆ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಸುನೀತಾ ಕಿರಣ್ ರವರು 10ನೇ ತರಗತಿಯ ಪಠ್ಯದ ಭಾಗವಾದ ಕುಮಾರವ್ಯಾಸ ಭಾರತದ ಭಾಮಿನಿ ಷಟ್ಪದಿ ಕಾವ್ಯ ಭಾಗವನ್ನು ಸುಶ್ರಾವ್ಯವಾಗಿ ವಾಚಿಸಿದರು. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕರಾದ ರಾಮ ಸಭ್ರಾಯ ಶೇಟ್ ರವರು ವ್ಯಾಖ್ಯಾನ ಮಾಡಿದರು.ಶಾಲೆ ಮುಖ್ಯಾಪಾಧ್ಯಾಯರಾದ ಶ್ರೀನಿವಾಸ್ ರವರು ಮಾತನಾಡಿ, ಗಮಕ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆದಿದ್ದು ನಮ್ಮ ಸೌಭಾಗ್ಯ ವಾಗಿದೆ. ನಮ್ಮ ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ದಾನಿಗಳಾದ ಎಚ್.ಬಿ. ಶೀಕಂಠಮೂರ್ತಿ, ನಿವೃತ್ತ ಪ್ರಾಧ್ಯಾಪಕ ಹೊರಕೆರೆ ದೇವಪ್ಪ, ಶಾಲೆ ಶಿಕ್ಷಕಿ ಪುಷ್ಪ, ಶಿಕ್ಷಕಿ ರಾಜೇಶ್ವರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.