ಧನುರ್ಮಾಸ ಆರಂಭವಾಯಿತ್ತೆಂದರೆ ಮೈನಡುಗಿಸುವ ಚಳಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೋಮವಾರ ಬೆಳಿಗ್ಗೆಯೇ ಕಲ್ಪತರುನಾಡಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟ ಮಂಜು ಆವರಿಸಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಪರದಾಡುವಂತಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಧನುರ್ಮಾಸ ಆರಂಭವಾಯಿತ್ತೆಂದರೆ ಮೈನಡುಗಿಸುವ ಚಳಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೋಮವಾರ ಬೆಳಿಗ್ಗೆಯೇ ಕಲ್ಪತರುನಾಡಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟ ಮಂಜು ಆವರಿಸಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಪರದಾಡುವಂತಾಯಿತು.ಈಗಾಗಲೇ ಮೈನಡುಗಿಸುವ ಚಳಿ ದುಪ್ಪಟವಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ಬೆಳಿಗ್ಗೆ ೬ ಗಂಟೆಯ ನಂತರವೂ ದಟ್ಟ ಮಂಜು ಆವರಿಸಿತ್ತು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಹಾಗೂ ಎದುರಿಗೆ ಬಂದವರು ಕಾಣದಷ್ಟರ ಮಟ್ಟಿಗೆ ಮಂಜು ದಟ್ಟವಾಗಿ ಆವೃತವಾಗಿತ್ತು. ಇನ್ನು ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಸ್ತೆಗಳಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಬೆಳಿಗ್ಗೆ 8.30 ಗಂಟೆಯಾದರೂ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಚಾಲಕರಿಗೆ ಕಾಣದಂತಾಗಿತ್ತು. ಇದರಿಂದಾಗಿ ಬಸ್, ಲಾರಿ, ಕಾರುಗಳು ಹೆಡ್‌ಲೈಟ್ ಹಾಕಿಕೊಂಡು ಚಲಿಸಿದರೂ ಸಹ ರಸ್ತೆಯಲ್ಲಿ ಬೆಳಕು ಕಾಣದಂತಾಗಿತ್ತು. ಬಸ್, ಖಾಸಗಿ ಬಸ್ ಚಾಲಕರನ್ನು ಹೊರತುಪಡಿಸಿದರೆ ಸರಕು ಸಾಗಣೆ, ಲಾರಿ ಚಾಲಕರುಗಳು ಮೈನಡುಗಿಸುವ ಚಳಿ, ದಟ್ಟ ಮಂಜಿನಿಂದಾಗಿ ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಟೀ ಅಂಗಡಿಗಳ ಬಳಿ ಬೆಂಕಿ ಹಾಕಿಕೊಂಡು ಚಳಿಯಿಂದ ಪಾರಾಗಲು ಮೈ ಬಿಸಿ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು. ಬೆಳಿಗ್ಗೆ 9 ರ ನಂತರ ಸೂರ್ಯನ ಕಿರಣಗಳು ಪ್ರಜ್ವಲಿಸಿದಂತೆ ದಟ್ಟವಾಗಿ ಆವರಿಸಿದ್ದ ಮಂಜು ನಿಧಾನವಾಗಿ ಕಡಿಮೆಯಾಯಿತು.