ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕಿನಲ್ಲಿ ಮಳೆ ಅಭಾವದಿಂದ ಜನ, ಜಾನುವಾರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಹಾಗೂ ಗೌರವ ಅಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಜುಲೈ ತಿಂಗಳು ಬಂದರೂ ಸಹ ಸಮರ್ಪಕ ಮಳೆಯಾಗದೆ ಬಿತ್ತನೆ ಕಾರ್ಯ ನಡೆದಿಲ್ಲ. ಕೆಲವು ಕಡೆ ಅಲ್ಪಸ್ವಲ್ಪ ಬಿದ್ದ ಮಳೆಗೆ ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಜಾನುವಾರುಗಳಿಗೆ ಮೇವಿಲ್ಲದೆ, ಜನರಿಗೆ ಯಾವುದೇ ಉದ್ಯೋಗವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ರೈತರ ಮತ್ತು ಸಾರ್ವಜನಿಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಖಂಡರಾದ ಶ್ರೀಶೈಲ ಕಬ್ಬಿನ, ಅಂಬರೀಶ್ ಸರೂರ, ಭೀಮನಗೌಡ ಹಳ್ಳಿ, ಶರಣಯ್ಯ ಮೇಲಿನಮಠ, ಭೀಮನಗೌಡ ಬಿರಾದಾರ, ಅಶೋಕ ಬಿರಾದಾರ, ಕಾಶಿನಾಥ ಬಿರಾದಾರ, ರಾಜಕುಮಾರ ಬಂಟನೂರ, ಶಂಕರಗೌಡ ಬಿರಾದಾರ, ಸನಗೊಂಡ ಪೂಜಾರಿ, ರಾಮು ಕಾಶಿ, ಪ್ರವೀಣ ದಂಡೋತಿ, ಸಂತೋಷ ಮಹಳೂರ, ಬಂದೆ ನಮಾಜ ಚಟ್ಟರಕಿ, ಸಿದ್ದರಾಮ ಪೂಜಾರಿ, ದೌಲಪ್ಪ ತಳವಾರ, ಶಿವರಾಯ ಪೂಜಾರಿ, ಮುತ್ತು ನಾದ, ಗಂಗಾಧರ ಬಡಿಗೇರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.