- ಕುವೆಂಪು ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವದಲ್ಲಿ ಪುಟ್ಟ ಬಾಲಕಿ ಉಪನ್ಯಾಸ
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡಿದರೆ ಗಣ ರಾಜ್ಯೋತ್ಸವಕ್ಕೆ ಹೆಚ್ಚು ಮೌಲ್ಯ ಬರುತ್ತದೆ ಎಂದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ 10 ನೇ ತರಗತಿ ವಿದ್ಯಾರ್ಥಿನಿ ದ್ರವ್ಯ ತಿಳಿಸಿದರು.
ಸೋಮವಾರ ಪಟ್ಟಣದ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ 77 ನೇ ಗಣ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿದರು. 1950 ರ ಜ.26 ರಂದು ಸಂವಿಧಾನ ಜಾರಿಗೆ ತರಲಾಯಿತು. ಸಂವಿಧಾನ ರಚನೆ ಕರಡು ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದರು. ಪ್ರಜಾಪ್ರಭುತ್ವ ಎಂದರೆ ಮನುಷ್ಯನ ಹಕ್ಕು. ನಮ್ಮ ದೇಶದಲ್ಲಿ ನಮ್ಮ ನಾಯಕನನ್ನು ನಾವೇ ಆಯ್ಕೆ ಮಾಡಿಕೊಳ್ಳಲು ನಮಗೆ ನೀಡಿರುವ ಹಕ್ಕಾಗಿದೆ. ಪ್ರತಿ ಯೊಬ್ಬರೂ ನಮಗೆ ನೀಡಿರುವ ಮತದಾನದ ಹಕ್ಕನ್ನು ಪಾಲಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ. 1951-52 ರಲ್ಲಿ ಪ್ರಥಮ ಚುನಾವಣೆ ಹಿಮಾಚಲ ಪ್ರದೇಶದಲ್ಲಿ ನಡೆಯಿತು. ಗಣ ರಾಜ್ಯೋತ್ವವ ಎಂದರೆ ಪ್ರಜಾಪ್ರಭುತ್ವದ ಹೃದಯ. ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸೋಣ ಎಂದರು.ತಹಸೀಲ್ದಾರ್ ಡಾ.ನೂರಲ್ ಹುದಾ ರಾಷ್ಟ್ರ ದ್ವಜಾರೋಹಣ ನೆರವೇರಿಸಿ ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಶಿಕ್ಷಣ, ಸಮಾನ ಮೂಲ ಭೂತ ಹಕ್ಕುಗಳು ಸಿಕ್ಕಿದೆ. ಡಾ.ಅಂಬೇಡ್ಕರ್ 2 ವರ್ಷ 11 ತಿಂಗಳು 18 ದಿನಗಳ ಕಾಲ ಶ್ರಮಿಸಿ ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಸಮಗ್ರ ಸಂವಿಧಾನ ರಚಿಸಿದರು. ಸಂವಿಧಾನ ಎಂಬುದು ಭಾರದದ ಸರ್ವೋಚ್ಚ ಕಾನೂನು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ ಹಾಗೂ ಬ್ರಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ 5 ಪ್ರಮುಖ ಮೌಲ್ಯ ಎಂದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷೆ ಇ.ಸಿ.ಜೋಯಿ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಹರ್ಷ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಪಿಸಿಎಆರ್.ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ಎಸ್.ಎಸ್.ಮುಖಂಡ ಡಿ.ರಾಮು, ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಇಂಜಿನಿಯರ್ ಸಾಗರ್ ಮತ್ತಿತರರು ಇದ್ದರು.