ತಿಪಟೂರು: ಸತ್ಯ, ಅಹಿಂಸೆ, ತ್ಯಾಗಗಳೆಂಬ ಮಂತ್ರದ ಮೂಲಕ ಸತ್ಯಾಗ್ರಹ, ಉಪವಾಸಗಳನ್ನೇ ಆಯುಧಗಳನ್ನಾಗಿಸಿಕೊಂಡು ಭಾರತಾದ್ಯಂತ ಸಂಚರಿಸಿ ಜನರಲ್ಲಿ ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸಿ ಸ್ವಾತಂತ್ರ್ಯಗಳಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸಿದ್ದ ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳು ಸಾರ್ವಕಾಲಿಕ ಎಂದು ನಿವೃತ್ತ ಪ್ರಾಂಶುಪಾಲ ನಂ.ಶಿವಗಂಗಪ್ಪ ಹೇಳಿದರು.
ಗಾಂಧೀಜಿಯವರು ದೇಶವನ್ನು ಸ್ವಾತಂತ್ರ್ಯವನ್ನಾಗಿಸಲು ಅಹಿಂಸೆಯ ಹಾದಿ ಹಿಡಿದು, ಉಪವಾಸ ಸತ್ಯಾಗ್ರಹದಂತ ಕಾರ್ಯಕ್ರಮಗಳ ಮೂಲಕ ಬ್ರಿಟಿಷರನ್ನೆ ಎಚ್ಚರಿಸಿದ್ದರು. ಸಮಾಜದಲ್ಲಿದ್ದ ವರ್ಣಭೇದ ನೀತಿ, ಅಸ್ಪೃಶ್ಯತೆ, ಜಾತೀಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ನೊಂದವರಿಗೆ ನ್ಯಾಯ ದೊರಕಿಸಿಕೊಡುತ್ತಿದ್ದರು. ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ಕೊಟ್ಟು ತಾವೇ ನಾಯಕರಾಗಿ ವಿಶ್ವದ ಗಮನಸೆಳೆದರು. ಗಾಂಧೀಜಿಯವರ ಚಳುವಳಿಯಲ್ಲಿ ಶಾಸ್ತ್ರೀಜಿಯವರ ಹೋರಾಟ ಹಾಗೂ ಸಾಧನೆಗಳು ಕೂಡ ಅಪಾರವಾದವು ಎಂದು ತಿಳಿಸಿದರು.
ತಾಲೂಕು ಸರ್ವೋದಯ ಮಂಡಲ ಅಧ್ಯಕ್ಷೆ ಶೋಭಾ ಜಯದೇವ್ ಮಾತನಾಡಿ, ಗಾಂಧಿ, ಶಾಸ್ತ್ರೀಗಳಿಬ್ಬರೂ ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದವರು. ಗಾಂಧಿ ಸತ್ಯದೊಡನೆ ಪ್ರಯೋಗ ಮಾಡಿದರೆ ಪ್ರಾಮಾಣಿಕತೆಯ ಮತ್ತೊಂದು ಮುಖವೇ ಶಾಸ್ತ್ರೀಜಿ ಎಂದರು.ಕಾರ್ಯಕ್ರಮದಲ್ಲಿ ಕ್ರಿಯಾಶೀಲ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಜಯಣ್ಣ, ಮಂಡಲದ ಉಪಾಧ್ಯಕ್ಷ ಕೆ.ಎಂ.ರಾಜಣ್ಣ, ಡಿ.ಎಸ್.ಮರುಳಪ್ಪ, ದೈಹಿಕ ಶಿಕ್ಷಕ ಓಂಕಾರಮೂರ್ತಿ, ಲಕ್ಷ್ಮೀ ಮಂಜುನಾಥ್ ಇದ್ದರು. ಫೋಟೋ 5-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಕ್ರೀಯಾಶೀಲ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.