ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಗಣೇಶ್‌ ಪ್ರಸಾದ್

KannadaprabhaNewsNetwork | Published : May 29, 2025 12:17 AM
ಗುಂಡ್ಲುಪೇಟೆಯಲ್ಲಿ ಕಂದಾಯ ಜಾಗದಲ್ಲಿ ಮನೆ ಕಟ್ಟಿದ್ದ ವಾಸದ ಮನೆ ಹಕ್ಕುಪತ್ರವನ್ನುಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಫಲಾನುಭವಿ ಮಹಿಳೆಗೆ ವಿತರಿಸಿದರು.
Follow Us

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಮುಕ್ತಿ ಕಾಲೋನಿ ಹಾಗೂ ಮುಂಟೀಪುರದ ಕಂದಾಯ ಜಾಗದಲ್ಲಿ 82 ವಾಸದ ಮನೆ ಕಟ್ಟಿದ್ದ ಫಲಾನುಭವಿಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಕ್ಕುಪತ್ರ ವಿತರಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಗಣೇಶ್‌ ಪ್ರಸಾದ್‌ ಅವರು, ತಾಲೂಕಿನ ಬರಗಿ ಗ್ರಾಮದಿಂದ ಮುಕ್ತಿ ಕಾಲೋನಿ ಹಾಗೂ ಮುಂಟೀಪುರ ಬೇರ್ಪಡಿಸಿದ ಬಳಿಕ ಹೊಸ ಕಂದಾಯ ಗ್ರಾಮ ರಚನೆ ಬಳಿಕ ಮುಂಟೀಪುರ ಹಾಗೂ ಮುಕ್ತಿ ಕಾಲೋನಿಯಲ್ಲಿ ಕಂದಾಯ ಜಾಗದಲ್ಲಿ ಮನೆ ಕಟ್ಟಿದ್ದ 82 ಮಂದಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯೇ ಮುತುವರ್ಜಿ ವಹಿಸಿ ಕಟ್ಟಿದ್ದ ವಾಸದ ಮನೆ ನೋಂದಾಯಿಸಿ, ಗ್ರಾಪಂ ಇ-ಸ್ವತ್ತು ಮಾಡಿಸಿದ ಬಳಿಕ ವಾಸದ ಮನೆಯ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

10 ಸಾಗುವಳಿ ಚೀಟಿ:

ತಾಲೂಕಿನ ಹಂಗಳ ಹೋಬಳಿಯ ಬೊಮ್ಮಲಾಪುರ ಗ್ರಾಮದ ದೇವಮ್ಮಣ್ಣಿ, ನಾಗಮ್ಮ, ಗವಿಯಮಣ್ಣಿ, ಹನುಮಂತಯ್ಯ, ಕುಮಾರ, ಕಸಬಾ ಹೋಬಳಿಯ ನೇನೇಕಟ್ಟೆ ಗ್ರಾಮದ ಸಿದ್ದಮ್ಮ, ಸಿದ್ದರಾಜು, ಶಿವಕುಮಾರ, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಮಂಜುಳ, ಸಿದ್ದರಾಜುಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ತೀರ್ಮಾನದಂತೆ ಸಾಗುವಳಿ ಜಮೀನಿಗೆ ದುರಸ್ತಿಪಡಿಸಿ, ನೋಂದಣಿ ಮಾಡಿಸಿ ,ಖಾತೆ ಮಾಡಿಸಿ 10 ಸಾಗುವಳಿ ಚೀಟಿಯನ್ನು ಶಾಸಕರು ವಿತರಿಸಿದರು.

ಸಮಾರಂಭದಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪಿ.ಮಹದೇವಪ್ಪ, ಕಲಾವತಿ ಮಹೇಶ್‌, ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ರಾಜಸ್ವ ನಿರೀಕ್ಷಕ ಮನೋಹರ್‌, ಗ್ರಾಮ ಆಡಳಿತ ಅಧಿಕಾರಿ ಅನಿತ, ಕೇಸ್‌ ವರ್ಕರ್‌ ಮಹದೇವಯ್ಯ ಹಾಗೂ ಫಲಾನುಭವಿಗಳಿದ್ದರು.

ಜಿಲ್ಲೆಗೆ ಮೊದಲು ಗುಂಡ್ಲುಪೇಟೆ!

ಗ್ರಾಮದಿಂದ ಬೇರ್ಪಟ್ಟ ಬಳಿಕ ಹೊಸ ಕಂದಾಯ ಗ್ರಾಮ ರಚನೆಯಾದ ನಂತರ ವಾಸದ 82 ಮನೆಗಳ ಹಕ್ಕುಪತ್ರ ವಿತರಣೆಯಲ್ಲಿ ಜಿಲ್ಲೆಗೆ ಗುಂಡ್ಲುಪೇಟೆ ಮೊದಲಾಗಿದೆ. ಮಂಗಳವಾರ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಮುಕ್ತಿ ಕಾಲೋನಿ ಹಾಗೂ ಮುಂಟೀಪುರದ 82 ವಾಸದ ಮನೆಗಳ ಹಕ್ಕುಪತ್ರ ವಿತರಣೆಯಾಗಿದೆ.

ಜಿಲ್ಲೆಯ ಯಾವ ತಾಲೂಕಿನಲ್ಲೂ ಕಂದಾಯ ಜಾಗದಲ್ಲಿ ವಾಸದ ಮನೆ ಕಟ್ಟಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಆದರೆ ಗುಂಡ್ಲುಪೇಟೆ ಶಾಸಕ ಹಾಗೂ ತಹಸೀಲ್ದಾರ್‌ ಕಾಳಜಿ ಫಲವಾಗಿ ಹಕ್ಕುಪತ್ರ ಫಲಾನುಭವಿಗಳ ಕಿಸೆ ಸೇರಿವೆ.