ರುದ್ರೇಶ್ ಹೊನ್ನೇನಹಳ್ಳಿ
ಗೌರಿ–ಗಣೇಶ ಹಬ್ಬಕ್ಕೆ ವಿಘ್ನ ನಿವಾರಕ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಮಾರಾಟಕ್ಕಿರುವ ಮಣ್ಣಿನಿಂದ ಮಾಡಿದ ವೈವಿಧ್ಯಮಯ ಗಣೇಶ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.
ಹೋಬಳಿಯಾದ್ಯಂತ ಗಣೇಶ ಹಬ್ಬದ ಆಚರಣೆ ಸಿದ್ದತೆ ಭರದಿಂದ ನಡೆಯುತ್ತಿವೆ. ರಸ್ತೆ ಬದಿ, ಬಡಾವಣೆಗಳಲ್ಲಿ ಗಣೇಶೋತ್ಸವ ಮಂಡಳಿಗಳ ಫ್ಲೆಕ್ಸಗಳು ರಾರಾಜಿಸುತ್ತಿವೆ. ‘ಶಿವ ಗಣೇಶ, ದರ್ಬಾರ್ ಗಣೇಶ, ವಿದ್ಯಾ ಗಣಪತಿ, ಮೂಷಿಕ ವಾಹನರೂಢ ಗಣೇಶ, ಬಲಮುರಿ ಮೂರ್ತಿ, ಯಡಮುರಿ, ಕೃಷ್ಣ ಗಣೇಶ, ಚಂದ್ರ ಗಣೇಶ, ಅಂಗೈ ಗಣಪ, ಸಿಂಹಾಸನಾರೂಢ ಗಣೇಶ, ಪಂಚ ಅಶ್ವಾರೂಢ ಗಣೇಶ ಸೇರಿ ಸುಮಾರು 30ಕ್ಕೂ ಬಗೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೂರ್ತಿಗಳ ದರದಲ್ಲಿ ಶೇ. 5ರಷ್ಟು ಏರಿಕೆ ಕಂಡು ಬರುತ್ತಿದೆ. ಮೂರ್ತಿಗಳ ದರ ಗಾತ್ರ, ಎತ್ತರ ಹಾಗೂ ಆಕಾರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಮನೆಯಲ್ಲಿ ಕೂರಿಸಬಹುದಾದ ಸಣ್ಣ ಗಣೇಶ ಮೂರ್ತಿಗಳ ದರ ಕನಿಷ್ಠ ₹250ರಿಂದ ಶುರುವಾಗುತ್ತದೆ. ದೊಡ್ಡ ಗಾತ್ರದ ಸುಮಾರು 8 ಅಡಿವರೆಗಿನ ಮೂರ್ತಿಗಳ ದರ ₹30 ಸಾವಿರವಿದೆ. ಮೂರ್ತಿಗಳ ವಿನ್ಯಾಸ ಹಾಗೂ ಎತ್ತರಕ್ಕೆ ಅನುಗುಣವಾಗಿ ದರ ನಿಗದಿಪಡಿಸುತ್ತೇವೆ ಎನ್ನುತ್ತಾರೆ ಮೂರ್ತಿ ತಯಾರಕರು.