ಕನ್ನಡಪ್ರಭ ವಾರ್ತೆ ಮದ್ದೂರು
ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಗೆಜ್ಜಲಗೆರೆ ಶಾಹಿ ಎಕ್ಸ್ ಪೋರ್ಟ್ ಮತ್ತಿತರ ಕಾರ್ಖಾನೆಗಳಿಗೆ ಗ್ರಾಮೀಣ ಭಾಗದಿಂದ ಬರುವ ಮಹಿಳಾ ಕಾರ್ಮಿಕರು ಮಿನಿ ಟೆಂಪೋ ಮತ್ತು ಪ್ರಯಾಣಿಕರ ಆಟೋಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಪ್ರಯಾಣದ ವೇಳೆ ಅವಘಡಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಇದರಿಂದ ಕಾರ್ಮಿಕರನ ಆಶ್ರಯಿಸಿರುವ ಕುಟುಂಬಗಳು ತೊಂದರೆಗೆ ಒಳಗಾಗುತ್ತಿವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.ಮಹಿಳಾ ಕಾರ್ಮಿಕರ ಅನುಕೂಲಕ್ಕಾಗಿ ಶಕ್ತಿ ಯೋಜನೆಯಿಂದ ಗಾರ್ಮೆಂಟ್ಸ್ ಕೆಲಸಕ್ಕೆ ಬರುವ ಮಹಿಳಾ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಉಚಿತ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲ ದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗರಾಜು, ಸಂಚಲನಾಧಿಕಾರಿ ಪರಮೇಶ್ವರಪ್ಪ, ತಾಂತ್ರಿಕ ಶಿಲ್ಪಿ ಚಿನ್ನ ಚುಂಚಯ್ಯ, ಶಾಹಿ ಎಕ್ಸ್ ಪೋರ್ಟ್ ನ ಪ್ರಧಾನ ಮಾನವ ಸಂಪನ್ಮೂಲ ಅಧಿಕಾರಿ ರಮೇಶ್ ಬಂಡಿ, ಹಿರಿಯ ಪ್ರಧಾನ ವ್ಯವಸ್ಥಾಪಕ ನಾಗೇಗೌಡ, ಹಿರಿಯ ವ್ಯವಸ್ಥಾಪಕರಾದ ವಿಶ್ವನಾಥ್ ಹಾಗೂ ಶಿವಪ್ರಸಾದ್ ಭಾಗವಹಿಸಿದ್ದರು.