ಸೋಂಪುರ ಕೈಗಾರಿಕಾ ಪ್ರದೇಶಕ್ಕೂ ಗ್ಯಾಸ್ ಟ್ರಬಲ್‌

KannadaprabhaNewsNetwork |  
Published : Mar 21, 2026, 01:15 AM IST
ಪೋಟೋ 3 : ಸೋಂಪುರ ಕೈಗಾರಿಕಾ ಪ್ರದೇಶ | Kannada Prabha

ಸಾರಾಂಶ

ದಾಬಸ್‍ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸುಮಾರು 1500ಕ್ಕೂ ಕೈಗಾರಿಕೆಗಳಿದ್ದು ಅದರಲ್ಲಿ 300ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಸಿಲಿಂಡರ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ಗ್ಯಾಸ್‌ ಸಮಸ್ಯೆ ಮುಂದುವರಿದರೆ ಕೈಗಾರಿಕೆಗಳ ಕಾರ್ಯಾಚರಣೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ

ದಾಬಸ್‍ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸುಮಾರು 1500ಕ್ಕೂ ಕೈಗಾರಿಕೆಗಳಿದ್ದು ಅದರಲ್ಲಿ 300ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಸಿಲಿಂಡರ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ಗ್ಯಾಸ್‌ ಸಮಸ್ಯೆ ಮುಂದುವರಿದರೆ ಕೈಗಾರಿಕೆಗಳ ಕಾರ್ಯಾಚರಣೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ವೆಲ್ಡಿಂಗ್, ಫ್ಯಾಭ್ರಿಕೇಷನ್, ಹೀಟ್ ಟ್ರೇ ಟ್ವೆಂಟ್, ಆಹಾರ ಸಂಸ್ಕರಣೆ ಮತ್ತಿತರ ಕೈಗಾರಿಕೆಗಳಲ್ಲಿ ಹೆಚ್ಚಾಗಿ ವಾಣಿಜ್ಯ ಗ್ಯಾಸ್ ಬಳಕೆಯಾಗುತ್ತದೆ. ಆದರೆ, ಕಳೆದ 12-15ದಿನಗಳಿಂದ ಗ್ಯಾಸ್ ಪೂರೈಕೆ ಅಸಮರ್ಪಕವಾಗಿದೆ. ಕಳೆದ ಕೆಲ ದಿನಗಳಿಂದ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯವಾಗಿದೆ. ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ತಮ್ಮ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಇದರಿಂದ ಕಾರ್ಮಿಕರಿಗೆ ಸಂಬಳವೂ ಸಮಸ್ಯೆ ಆಗಲಿದೆ.

ಕೈಗಾರಿಕೆಗಳಿಗೆ ಸಂಕಷ್ಟ: ಮುಂಚಿತ ಆರ್ಡರ್‌ಗಳನ್ನು ಸೂಕ್ತ ವೇಳೆಗೆ ಸರಬರಾಜು ನೀಡದಿದ್ದರೆ ದಂಡ ವಿಧಿಸುತ್ತಾರೆ. ಅದನ್ನು ಕೂಡ ನಾವೇ ಭರಿಸಬೇಕಾಗುತ್ತದೆ. ಸದ್ಯಕ್ಕೆ ಗ್ಯಾಸ್ ಅವಲಂಬಿತ ಕೈಗಾರಿಕೆಗಳ ಸ್ಥಿತಿ ಕಷ್ಟವಾಗಿದೆ ಎನ್ನುತ್ತಾರೆ ಕಂಪನಿಗಳ ಮಾಲೀಕರು.

ಇಂಡಸ್ಟ್ರಿಯಲ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ದರಿಂದ, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಎದುರಾಗುವ ಸಾಧ್ಯತೆಯಿದೆ. ಇದರಿಂದ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಕುತ್ತು ಬೀಳಲಿದೆ.

ಕ್ಯಾಂಟಿನ್ ಗಳು ಕ್ಲೋಸ್: ಇನ್ನೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಊಟ, ತಿಂಡಿಗಾಗಿ ಕಂಪನಿಯಲ್ಲಿರುವ ಕ್ಯಾಂಟಿನ್ ಗಳನ್ನು ಅವಲಂಬಿಸಿರುತ್ತಾರೆ. ಅದರಲ್ಲೂ ಮದುವೆಯಾಗದವರಿಗೆ ಅದೇ ಮನೆಯಾಗಿದ್ದು, ಗ್ಯಾಸ್ ಪೂರೈಕೆ ಇಲ್ಲದಿರುವುದರಿಂದ ಕ್ಯಾಂಟಿನ್ ಕ್ಲೋಸ್ ಆಗಿದ್ದು ಕಂಪನಿಯವರು ಮಧ್ಯಾಹ್ನ, ರಾತ್ರಿ ಊಟಕ್ಕಾಗಿ ಪರದಾಡಬೇಕಾದ ಸನ್ನಿವೇಶವೂ ಒದಗಿಬಂದಿದೆ.

ಹೋಟೆಲ್, ಅಂಗಡಿಗಳಿಗೂ ಗ್ಯಾಸ್ ಟ್ರಬಲ್ : ಈಗಾಗಲೇ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ನಲುಗಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ. ಪಿಜಿ ಹಾಸ್ಟೆಲ್‍ಗಳು, ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೂ ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ ಎದುರಾಗಿದೆ. ಹೋಟೆಲ್ ಊಟವನ್ನೇ ನಂಬಿಕೊಂಡಿರುವ ಗ್ರಾಹಕರಿಗೂ ಸಂಕಷ್ಟ ಎದುರಾಗಿದೆ.

ಶೇ. 80ರಷ್ಟು ಹೋಟೆಲ್‍ಗಳು ಬಂದ್: ನೆಲಮಂಗಲ ತಾಲೂಕಿನಲ್ಲಿ ಎಲ್ ಪಿಜಿ ಕೊರತೆಯಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಬಂದ್ ಆಗಿವೆ. ಇದರಿಂದಾಗಿ ಕಾರ್ಮಿಕರು ಕೂಡ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಹೋಟೆಲ್‍ಗಳು ದಿನನಿತ್ಯ ತಯಾರಿಸುವ ಅಡುಗೆ ಪದಾರ್ಥಗಳ ಪಟ್ಟಿಯನ್ನು ಕಡಿತ ಮಾಡಿದೆ. ಸಿಲಿಂಡರ್ ಕೊರತೆ ಪರಿಣಾಮ ಹೋಟೆಲ್‍ಗಳಲ್ಲಿ ತಿಂಡಿ ತಿನಿಸು ದರವೂ ದುಬಾರಿಯಾಗಿದೆ. ಕೆಲವು ಹೋಟೆಲ್‍ಗಳಲ್ಲಿ ಸೌದೆ ಒಲೆಯಲ್ಲಿ ಆಹಾರ ಪದಾರ್ಥ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಸೌದೆಗೆ ಬೇಡಿಕೆ ಬಂದಿದೆ. ಮತ್ತೆ ಕೆಲವು ಹೋಟೆಲ್‍ಗಳಲ್ಲಿ ಇಂಡಕ್ಷನ್ ಸ್ಟೌವ್‍ಗೆ ಮೊರೆ ಹೋಗಿದ್ದಾರೆ.

ಕಾಳ ಸಂತೆಯಲ್ಲಿ ಮಾರಾಟ: ಗ್ಯಾಸ್‌ ಸಮಸ್ಯೆ ತಲೆದೋರದ ಮುನ್ನ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್ ಗಳನ್ನು 1600 ರು.ಗಳಿಗೆ ಸಿಗುತ್ತಿತ್ತು. ಇದೀಗ ಪೂರೈಕೆ ಇಲ್ಲದ ಪರಿಣಾಮ ಕೆಲವರು ಕಾಳಸಂತೆಯಲ್ಲಿ 4000 ರು.ಗಳಿಂದ 6000 ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಗ್ರಾಹಕರ ಆಕ್ರೋಶ:

ವಾಣಿಜ್ಯ ಬಳಕೆ ಎಲ್‍ಪಿಜಿ ಅಭಾವದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋಟೆಲ್‍ಗಳು ಆಹಾರ ಪದಾರ್ಥಗಳ ದರವನ್ನು ಶೇ.15ರಿಂದ ಶೇ.20ರಷ್ಟು ಏರಿಕೆ ಮಾಡಿರುವ ಬಗ್ಗೆ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ತೆರೆಯುತ್ತಿದ್ದ ಹೋಟೆಲ್ ಬೆಳಿಗ್ಗೆ 10 ಗಂಟೆಗೆ ತೆರೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಗತ್ಯ ತಿಂಡಿ, ಕಾಫಿ, ಟೀ ಮಾರಾಟ ಮಾಡುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರು ಸ್ಪಷ್ಟನೆ ಕೊಟ್ಟಿದ್ದಾರೆ.

ಕೋಟ್..............

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿಯೂ ಗ್ಯಾಸ್ ಅವಲಂಬಿತ ಕೈಗಾರಿಕೆಗಳಿವೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಮಸ್ಯೆ ಪರಿಹಾರವಾಗದಿದ್ದರೆ ಕೈಗಾರಿಕೆಗಳನ್ನು ನಡೆಸಲು ಕೈಗಾರಿಕೋದ್ಯಮಿಗಳಿಗೆ ಕಷ್ಟವಾಗಲಿದೆ.

-ಕಂಠಪ್ಪ, ಅಧ್ಯಕ್ಷರು,

ಸೋಂಪುರ ಕೈಗಾರಿಕೆಗಳ ಸಂಘ

ಕೋಟ್ ................

ನಮಗೆ ಕಂಪನಿಗಿಂತ ಕ್ಯಾಂಟಿನ್ ನಲ್ಲಿ ಗ್ಯಾಸ್ ಸಮಸ್ಯೆ ಎದುರಾಗಿದೆ. ಪ್ರತಿನಿತ್ಯ ನೂರಾರು ಕಾರ್ಮಿಕರು ಈ ಕ್ಯಾಂಟೀನ್ ನ ಊಟವನ್ನೇ ನೆಚ್ಚಿಕೊಂಡಿದ್ದರು. ಇದೀಗ ಗ್ಯಾಸ್ ಪೂರೈಕೆ ಇಲ್ಲದೆ ಕ್ಯಾಂಟಿನ್ ತೆರೆಯದ ಪರಿಣಾಮ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.

-ಪವಿತ್ರಾ, ಮಾನವ ಸಂಪನ್ಮೂಲ ಅಧಿಕಾರಿ

ಎಚ್ ಎಚ್‌ ವಿ ಕಂಪನಿ

ಪೋಟೋ 3 : ಸೋಂಪುರ ಕೈಗಾರಿಕಾ ಪ್ರದೇಶ

ಪೋಟೋ 4: ದಾಬಸ್‍ಪೇಟೆ ಪಟ್ಟಣದಲ್ಲಿ ಹೋಟೆಲ್ ನವರು ಸೌದೆ ಉಪಯೋಗಿಸಿ ಅಡುಗೆ ಮಾಡುತ್ತಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ