ಕನ್ನಡಪ್ರಭವಾರ್ತೆ ಪಾವಗಡ
ಟಿವಿ ಹಾಗೂ ಮೊಬೈಲ್ ವೀಕ್ಷಣೆಯಿಂದ ದೂರ ಸರಿದು ಉತ್ತಮ ಪುಸ್ತಕ ಅಧ್ಯಯನದ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ವಿದ್ಯಾವಂತರಾಗಿ ಪ್ರಗತಿ ಕಾಣುವಂತೆ ಪಟ್ಟಣದ ಶೃಂಗೇರಿ ಶ್ರೀ ಸರಸ್ವತಿ ಶಾಲೆಯ ಕಾರ್ಯದರ್ಶಿ ಶ್ರೀರಾಮ ಕರೆ ನೀಡಿದರು.ಪಟ್ಟಣದ ಶೃಂಗೇರಿ ಶ್ರೀ ಸರಸ್ವತಿ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ ಖ್ಯಾತ ಸಾಹಿತಿ ಕೆ.ವಿ.ಲಕ್ಷ್ಮಣಮೂರ್ತಿ ರಚಿಸಿದ ಅಬ್ಬಕ್ಕ ದೇವಿ ಜತೆ ಪ್ರಯಾಣ ಎಂಬ ಪುಸ್ತಕ ಬಿಡುಗಡೆಗೊಳಿಸಿದ ನಂತರ ಮಾತನಾಡಿದರು.
ಟಿವಿ ಮೊಬೈಲ್ ಹೆಚ್ಚು ವೀಕ್ಷಣೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಪಠ್ಯ ಪುಸ್ತಕ ಹಾಗೂ ಉತ್ತಮ ಚಟವಟಿಕೆಯಿಂದ ನಿಮ್ಮ ಆರೋಗ್ಯ ಸದೃಢವಾಗಲಿದೆ. ಹೀಗಾಗಿ ಹೆಚ್ಚು ಅಧ್ಯಯನ ಶೀಲರಾಗಿ ಪ್ರಗತಿ ಕಾಣುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸಾಹಿತಿಗಳಾದ ಕೆ.ವಿ. ಲಕ್ಷ್ಮಣಮೂರ್ತಿ ರಚಿಸಿರುವ ರಾಣಿ ಅಬ್ಬಕ್ಕ ದೇವಿ ಜೊತೆ ಪಯಣ ಎಂಬ ಪುಸ್ತಕ ಅದ್ಭುತವಾಗಿದೆ. ಮಕ್ಕಳು ಇಂತಹ ಪುಸ್ತಕಗಳನ್ನು ಓದಿ, ತ್ಯಾಗ ಬಲಿದಾನಗಳ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಅಭ್ಯಾಸ ಮಾಡಿ ನಿಮ್ಮ ಜೀವನದಲ್ಲೂ ದೇಶಪ್ರೇಮವನ್ನು ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಖ್ಯಾತ ಸಾಹಿತಿ ಕೆ.ವಿ.ಲಕ್ಷ್ಮಣ್ ಮೂರ್ತಿ ಮಾತನಾಡಿ ರಾಜ್ಯದ ಮಂಗಳೂರಿನ ಉಳ್ಳಾಲದ ಸಂಸ್ಥಾನದ ರಾಣಿ ಅಬ್ಬಕ್ಕದೇವಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಇವರ ಮಗಳ ಹೆಸರು ಸಹ ರಾಣಿ ಅಬ್ಬಕ್ಕ ದೇವಿಯಾಗಿದ್ದು ಇಬ್ಬರು ಸಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ. 2019 ರಲ್ಲಿ ಇವರ ಬಗ್ಗೆ ಅಧ್ಯಯನ ಮಾಡಲು ಕೇರಳ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ಸಂಪೂರ್ಣವಾದ ಮಾಹಿತಿಯನ್ನು ಕಲೆಹಾಕಿ, ಅವರ ಜೀವನ ಚರಿತ್ರೆಯನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ರಾಣಿ ಅಬ್ಬಕ್ಕ ದೇವಿಯ ಜೊತೆ ಪಯಣ ಎಂಬ ಪುಸ್ತಕವನ್ನು ರಚಿಸಿದ್ದು ಇಂದು ಬಿಡುಗಡೆ ಆಗುತ್ತಿರುವುದು ಎಂಟನೇ ಆವೃತ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ವೇಳೆ ಶಾಲೆಯ ಕನ್ನಡ ಶಿಕ್ಷಕರು ಸಾಹಿತಿಗಳಾದ ಬ್ಯಾಡನೂರು ಚೆನ್ನ ಬಸವಣ್ಣ ಮಾತನಾಡಿ, ಕೆ.ವಿ. ಲಕ್ಷ್ಮಣ ಮೂರ್ತಿಯವರು ರಚಿಸಿದ ರಾಣಿ ಅಬ್ಬಕ್ಕ ದೇವಿಯ ಜೊತೆಯ ಪಯಣ ಎಂಬ ಪುಸ್ತಕ ಐದು ಭಾಷೆಗಳಿಗೆ ಅನುವಾದ ಗೊಂಡಿದೆ. ಈ ಪುಸ್ತಕವು ಎಂಟನೇ ಆವೃತ್ತಿಯಾಗಿದ್ದು ನಮ್ಮ ಶಾಲೆಯಲ್ಲಿ ಬಿಡುಗಡೆ ಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಪುಸ್ತಕದ ಅನೇಕ ವಿಚಾರಗನ್ನು ವಿವರಿಸಿ ಕೊಂಡಾಡಿದರು.
ಶಾಲೆಯ ಮುಖ್ಯ ಶಿಕ್ಷಕ ದಯಾನಂದ್,ಶಿಕ್ಷಕರಾದ ರಾಕೇಶ್ ,ನಾಗರಾಜು, ಮೋಹನ್, ಅನಿತಾ, ಮಾಧುರ್ಯಾ, ರೂಪ, ಕವಿತಾ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.