ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗವಾಗಿರುವ ಕಣ್ಣಿನ ರಕ್ಷಣೆ ಬಹಳ ಮುಖ್ಯ. ಯಾವುದೇ ನಿಖರ ಕಾರಣವಿಲ್ಲದೇ ಬರುವ ಕಣ್ಣಿನ ಪೊರೆ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ಅನಾಹುತ ತಡೆಯಬಹುದಾಗಿದೆ.
ಕುಷ್ಟಗಿ:
ನೇತ್ರದಾನ ಮಹಾದಾನವಾಗಿದ್ದು ಓರ್ವರು ನೇತ್ರ ದಾನವಾಗಿ ನೀಡಿದರೆ ಆ ನೇತ್ರವೂ ನಾಲ್ಕು ಜನರಿಗೆ ಉಪಯೋಗವಾಗಲಿದೆ ಎಂದು ಡಾ. ಶಮೀಕ್ಷಾ ಹೇಳಿದರು.
ತಾಲೂಕಿನ ದೋಟಿಹಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತಿಕ ಜಾನಪದ ಕಲಾ ಸಂಘ, ವಿನಾಯಕ ಆಫ್ಟಿಕಲ್ಸ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗವಾಗಿರುವ ಕಣ್ಣಿನ ರಕ್ಷಣೆ ಬಹಳ ಮುಖ್ಯ. ಯಾವುದೇ ನಿಖರ ಕಾರಣವಿಲ್ಲದೇ ಬರುವ ಕಣ್ಣಿನ ಪೊರೆ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ಅನಾಹುತ ತಡೆಯಬಹುದಾಗಿದೆ ಎಂದರು.
ಆರೋಗ್ಯ ಹಿರಿಯ ಮೇಲ್ವಿಚಾರಕ ರವೀಂದ್ರ ನಂದಿಹಾಳ ಮಾತನಾಡಿ, ವ್ಯಕ್ತಿ ಪೌಷ್ಟಿಕ ಆಹಾರ ಸೇವನೆಯಿಂದ ಕಣ್ಣಿನ ಸಮಸ್ಯೆಯನ್ನು ದೂರವಿಡಬಹುದು. ಇದರ ಜತೆಗೆ ಸೊಪ್ಪು, ತರಕಾರಿ, ಹಣ್ಣು, ಮೊಳಕೆ ಕಾಳುಗಳಂತಹ ಪೌಷ್ಟಿಕಾಂಶಗಳುಳ್ಳ ಆಹಾರ ಪದಾರ್ಥ ಸೇವಿಸುವುದರಿಂದ ಕಣ್ಣಿನ ರಕ್ಷಣೆ ಪಡೆಯಬಹುದಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲಿಯೇ ತಪಾಸಣೆ ಮಾಡಿಸಿ ಸಮಸ್ಯೆ ಕಂಡುಬಂದರೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.ಈ ವೇಳೆ ವೈದ್ಯಾಧಿಕಾರಿ ಡಾ. ಆನಂದ, ಮಲ್ಲನಗೌಡ, ಜಯಶ್ರೀ, ಬಸವರಾಜ ಚೋಕಾವಿ, ಶ್ರೀನಿವಾಸ ಕಂಟ್ಲಿ, ದೇವರಾಜ ಪೂಜಾರ, ವೆಂಕಟೇಶ ರೆಡ್ಡಿ, ಪ್ರಭು ಜಹಗೀರದಾರ, ನಾಗರಾಜ ಕಾಳಗಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು. ಈ ಶಿಬಿರದಲ್ಲಿ 150 ಜನರಿಗೆ ತಪಾಸಣೆ ಮಾಡಲಾಯಿತು. 62 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.