ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ: ಶಾಸಕಿ ಅನ್ನಪೂರ್ಣ ತುಕಾರಾಂ

KannadaprabhaNewsNetwork |  
Published : Sep 11, 2025, 12:04 AM IST
ಚಿತ್ರ: ೯ಎಸ್.ಎನ್.ಡಿ.೦೧- ಸಂಡೂರಿನ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದ ಡಾ.ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರ ವ್ಯಕ್ತಿತ್ವ, ಸಾಧನೆ ಹಾಗೂ ಅವರು ಅನುಸರಿಸುತ್ತಿರುವ ಮೌಲ್ಯಗಳು ಎಲ್ಲರಿಗೂ ಆದರ್ಶ ಹಾಗೂ ಸ್ಪೂರ್ತಿಯಾಗಿವೆ.

ಗೌರವ ಡಾಕ್ಟರೇಟ್ ಪಡೆದ ಡಾ. ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರ ವ್ಯಕ್ತಿತ್ವ, ಸಾಧನೆ ಎಲ್ಲರಿಗೂ ಸ್ಪೂರ್ತಿ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನಾ ಸಮಾರಂಭಕನ್ನಡಪ್ರಭ ವಾರ್ತೆ ಸಂಡೂರು

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರ ವ್ಯಕ್ತಿತ್ವ, ಸಾಧನೆ ಹಾಗೂ ಅವರು ಅನುಸರಿಸುತ್ತಿರುವ ಮೌಲ್ಯಗಳು ಎಲ್ಲರಿಗೂ ಆದರ್ಶ ಹಾಗೂ ಸ್ಪೂರ್ತಿಯಾಗಿವೆ ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ.ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಯಶಸ್ಸು ಒಂದು ದಿನದಲ್ಲಿ ದೊರೆಯುವಂತಾದ್ದಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಇದು ತ್ಯಾಗವನ್ನು ಬಯಸುತ್ತವೆ. ಸಮಾಜದಲ್ಲಿ ಎರಡು ರೀತಿಯ ಜನರನ್ನು ಕಾಣುತ್ತೇವೆ. ಒಂದು ವರ್ಗದ ಜನ ತಮಗಾಗಿ ಬದುಕುವವರು. ಮತ್ತೊಂದು ವರ್ಗ ಇತರರ ಬದುಕನ್ನು ಬದಲಾಯಿಸಲು, ಸುಧಾರಿಸಲು ಬದುಕುವವರು. ಡಾ.ಬಿ. ನಾಗನಗೌಡ ಹಾಗೂ ಡಾ.ವಸುಂಧರಾ ಭೂಪತಿಯವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದರು.

ಡಾ.ವಸುಂಧರಾ ಭೂಪತಿಯವರು ವೈದ್ಯರಾಗಿ, ಲೇಖಕಿಯಾಗಿ, ಜನಪರ ಹೋರಾಟಗಾರರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಡಾ. ನಾಗನಗೌಡರು ಉದ್ದಿಮೆದಾರರಾಗಿ ಶಿಕ್ಷಣ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಗಳಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಎಲ್ಲರೂ ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ತಿಳಿಸಿದರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಬಿ. ರವಿ ಮಾತನಾಡಿ, ಈ ಹಿಂದೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿನ ಕನ್ನಡ ವಿಭಾಗ ಮುಚ್ಚಿಹೋಗುವ ಹಂತದಲ್ಲಿತ್ತು. ಇದು ವಿದ್ಯಾರ್ಥಿಗಳ ಕೊರತೆಯಿಂದಲ್ಲ. ದಾಖಲಾತಿಗೆ ₹೨೨೮೦೦ ಫೀಜನ್ನು ಕಟ್ಟಬೇಕಿತ್ತು. ಈ ವಿಷಯವನ್ನು ಬಿ. ನಾಗನಗೌಡರ ಗಮನಕ್ಕೆ ತಂದಾಗ, ಕೂಡಲೇ ೧೧ ವಿದ್ಯಾರ್ಥಿಗಳ ಫೀಜನ್ನು ಕಟ್ಟುವುದರ ಮೂಲಕ ಕೇಂದ್ರದಲ್ಲಿ ಕನ್ನಡ ವಿಭಾಗ ಉಳಿಯಲು ಕಾರಣರಾದರು. ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ಸಹಾಯ ಹಸ್ತ ಚಾಚಿದ್ದಾರೆ ಎಂದರು.

ಡಾ. ವಸುಂಧರಾ ಭೂಪತಿಯವರು ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ದಾಸರಾಗಿ ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಆಸಕ್ತಿ ಬೆಳೆಸಬೇಕಿದೆ. ಸಮಾಜಮುಖಿ ಕೆಲಸದಲ್ಲಿ ಅವರನ್ನು ತೊಡಗಿಸಬೇಕೆಂದರಲ್ಲದೆ, ಬಳ್ಳಾರಿಯಲ್ಲಿನ ತಮ್ಮ ವೈದ್ಯಕೀಯ ಶಿಕ್ಷಣ, ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ತಾವು ಮೊದಲು ಆರಂಭಿಸಿದ ಆರೋಗ್ಯ ಸೇವೆಯ ಕುರಿತು ವಿವರಿಸಿದರು.

ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ವಿ.ಟಿ. ಕಾಳೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ.ಕೆ. ತಿಪ್ಪೇರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವರಾಜ ಮಸೂತಿ ಡಾ. ವಸುಂಧರಾ ಭೂಪತಿಯವರ ಪರಿಚಯ ಮಾಡಿಕೊಟ್ಟರೆ, ಸಿ.ಎಂ. ಶಿಗ್ಗಾವಿಯವರು ಡಾ.ಬಿ. ನಾಗನಗೌಡರ ಕುರಿತು ಪರಿಚಯ ಮಾಡಿಕೊಟ್ಟರು. ಕಸಾಪಕ್ಕೆ ನೂತನವಾಗಿ ದತ್ತಿ ನೀಡಿದ ಅರಳಿ ಕುಮಾರಸ್ವಾಮಿ ಹಾಗೂ ಟಿ.ಕೆ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು, ಹೋಬಳಿ ಘಟಕದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಯವರು, ಹಿತೈಷಿಗಳು ಡಾ.ಬಿ. ನಾಗನಗೌಡ ಹಾಗೂ ಡಾ.ವಸುಂಧರಾ ಭೂಪತಿಯವರನ್ನು ಸನ್ಮಾನಿಸಿದರು. ಟಿ. ವೆಂಕಟೇಶ್ ಹಾಗೂ ತಬಲಾ ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನೀಡಿದರು. ಎಚ್.ಎನ್. ಭೋಸ್ಲೆ ಸ್ವಾಗತಿಸಿದರು. ಜಿ. ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಜೆ. ಪುರುಷೋತ್ತಮ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು, ನೂರಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ