ಭಟ್ಕಳ ವಡೇರ ಮಠದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ
ಮಾನವನ ಸೃಷ್ಟಿಗೆ ಕಾರಣೀಕರ್ತನಾದ ದೇವರು ಒಬ್ಬನೇ. ಅಲ್ಲಿ ಅಂತರ್ಜಾಲವೂ ಇಲ್ಲ, ತಂತ್ರಜ್ಞಾನವೂ ಇಲ್ಲ. ಆದ್ದರಿಂದ ಎಐಗಿಂತ ಜಿಐ (ಗಾಡ್ಸ್ ಇಂಟೆಲಿಜೆನ್ಸ್) ಅತ್ಯುನ್ನತವಾದುದು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಪಟ್ಟಣದ ವಡೇರ ಮಠದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಿರ್ಮಾಣಕ್ಕೆ ಹಲವು ದೇಶಗಳ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ತಂತ್ರಜ್ಞರ ಪರಿಶ್ರಮ ಅಗತ್ಯವಾಗುತ್ತದೆ. ಡೇಟಾ ಸಂಗ್ರಹ, ಬ್ಯಾಕ್ಅಪ್, ಕೂಲಿಂಗ್ ವ್ಯವಸ್ಥೆ ಸೇರಿದಂತೆ ಅನೇಕ ಹಂತಗಳಲ್ಲಿ ಪರಿಣಿತರ ಸೇವೆ ಬೇಕಾಗುತ್ತದೆ. ಆದರೆ ದೇವರು ಕೇವಲ ಮಾನವನಷ್ಟೇ ಅಲ್ಲ, ಸಕಲ ಜೀವಜಾಲಗಳ ಉಗಮಕ್ಕೂ ಕಾರಣನಾಗಿದ್ದಾನೆ ಎಂದರು.ಅಧಿಕ ಮಾಸದಲ್ಲಿ ಕಾಮ್ಯ ವ್ರತಗಳನ್ನು ಆಚರಿಸುವುದಿಲ್ಲ. ಈ ಮಾಸಕ್ಕೆ ದೇವರೇ ಅಧಿಪತಿಯಾಗಿರುವುದರಿಂದ ಈ ಅವಧಿಯಲ್ಲಿ ಮಾಡುವ ದೇವಕಾರ್ಯಗಳು ಮತ್ತು ಆರಾಧನೆಗಳಿಗೆ ಬಹುಪಟ್ಟು ಫಲ ದೊರೆಯುತ್ತದೆ. ಮಾನವ ಜನ್ಮವನ್ನು ದೇವರು ಕರುಣಿಸಿದ್ದಾನೆ. ಆದ್ದರಿಂದ ದೇವರ ನಾಮಸ್ಮರಣೆ ಮಾಡಿ, ಆತನ ಉಪಕಾರವನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು. ಆತನ ಆರಾಧನೆ ಮತ್ತು ಉಪಾಸನೆಯ ಮೂಲಕ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಆರಾಧನೆಗೆ ಅಧಿಕ ಮಾಸವು ಅತ್ಯುತ್ತಮ ಅವಕಾಶ ಒದಗಿಸಿದೆ ಎಂದು ಅಭಿಪ್ರಾಯಪಟ್ಟರು.
3ಬಿಕೆಲ್1: ಭಟ್ಕಳದ ವಡೇರ ಮಠದಲ್ಲಿ ಪರ್ತಗಾಳಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.