ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಪೋಷಕರಿಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ

KannadaprabhaNewsNetwork |  
Published : Nov 09, 2025, 01:30 AM IST
8 ಟಿವಿಕೆ 2 – ತುರುವೇಕೆರೆ ತಾಲೂಕು ಅರೇಮಲ್ಲೆನಹಳ್ಳಿಯ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಭಕ್ತಿ ಶ್ರದ್ಧೆಯಿಂದ ಶಿಲೆಯನ್ನಿಟ್ಟು ಗುರುಗಳ ಮಾರ್ಗದರ್ಶನದಲ್ಲಿ ಪೂಜಿಸಿದರೂ ಸಹ ಅದು ಶಂಕರನಾಗುತ್ತದೆ. ಧಾರ್ಮಿಕ ವಿಚಾರಗಳು ಬಂದಾಗ ಗ್ರಾಮದಲ್ಲಿ ಒಗ್ಗಟ್ಟು ತೋರಿಸಿ ಸತ್ಕಾರ್ಯ ಮಾಡಿದಲ್ಲಿ ಗ್ರಾಮವೇ ಶಾಂತಿಯಿಂದ ಇರುತ್ತದೆ ಎಂಬುದಕ್ಕೆ ಈ ಅರೇಮಲ್ಲೇನಹಳ್ಳಿ ಗ್ರಾಮವೇ ಸಾಕ್ಷಿ.

ಕನ್ನಡಪ್ರಭವಾರ್ತೆ, ತುರುವೇಕೆರೆ

ಸಮಾಜದಲ್ಲಿ ತಾಂಡವವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ. ಮಕ್ಕಳು ಸಣ್ಣವರಿರುವಾಗಲೇ ಉತ್ತಮ ಸಂಸ್ಕಾರ ಪೋಷಕರು ಕಲಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.

ತಾಲೂಕಿನ ಅರೇಮಲ್ಲೇನಹಳ್ಳಿ ಶ್ರೀ ಲಕ್ಕಮ್ಮ ದೇವಿ, ಶ್ರೀ ತುಳಸಮ್ಮ ದೇವಿ, ಶ್ರೀ ಭೈರವೇಶ್ವರಸ್ವಾಮಿ ದೇವರುಗಳ ನೂತನ ದೇವಾಲಯ ಉದ್ಘಾಟನೆ, ನೂತನ ದೇವತಾಮೂರ್ತಿಗಳ ಪ್ರತಿಷ್ಠಾಪನೆ, ನೂತನ ಗೋಪುರ ಕಳಸ ಪ್ರತಿಷ್ಠಾಪನೆ ಕುಂಭಾಭಿಷೇಕ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಪಾಪ ಕರ್ಮಗಳು ತುಂಬಿ ತುಳುಕುತ್ತಿರುವುದರಿಂದ ದೇವರು ನಮ್ಮ ಕಣ್ಣಿಗೆ ಕಾಣದಾಗಿದ್ದಾನೆ. ನಮ್ಮಲ್ಲಿ ಅಜ್ಞಾನ ತುಂಬಿ ಹೋಗಿದೆ. ಎಲ್ಲಿ ನೋಡಿದರೂ ಅನ್ಯಾಯ, ಭ್ರಷ್ಟಾಚಾರ ತುಂಬಿಹೋಗಿದೆ. ದೇವರ ಇರುವಿಕೆಯನ್ನು ಪ್ರಶ್ನಿಸುವ, ದೇವರನ್ನೇ, ದೇವರ ದುಡ್ಡನ್ನೇ ಹೊತ್ತೊಯ್ಯುವ ದುರ್ಬುದ್ಧಿ ಜನರಲ್ಲಿ ಬಂದಿದೆ. ದೇವರೆಂಬ ಭಯ ಇಲ್ಲದಾಗಿದೆ. ಅನೇಕ ಜನ್ಮಗಳಿಂದಲೂ ಪಾಪ ಕರ್ಮಗಳನ್ನು ಮಾಡಿರುವುದರಿಂದ ನಮಗೆ ದೇವರು ಕಾಣಲಾರ. ನಾವು ಮಾಡಿರುವ ಕರ್ಮಗಳನ್ನು ಈ ಜನ್ಮದಲ್ಲಾದರೂ ತೊಳೆದುಕೊಳ್ಳಲು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಹಾಗಾಗಿ ಮಕ್ಕಳು ಚಿಕ್ಕವರಿದ್ದಾಗಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಆಗ ಮಾತ್ರ ನಾವು ಆ ಮಗುವಿನಿಂದ ಉತ್ತಮ ನಡವಳಿಕೆ ನಿರೀಕ್ಷಿಸಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ಇಚ್ಛಾ ಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಯನ್ನು ಸ್ವ ಅನುಭವದಿಂದ ಪಡೆದಲ್ಲಿ ಆತ್ಮಶಕ್ತಿ ವೃದ್ಧಿಯಾಗಲಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಭಕ್ತಿ ಶ್ರದ್ಧೆಯಿಂದ ಶಿಲೆಯನ್ನಿಟ್ಟು ಗುರುಗಳ ಮಾರ್ಗದರ್ಶನದಲ್ಲಿ ಪೂಜಿಸಿದರೂ ಸಹ ಅದು ಶಂಕರನಾಗುತ್ತದೆ. ಧಾರ್ಮಿಕ ವಿಚಾರಗಳು ಬಂದಾಗ ಗ್ರಾಮದಲ್ಲಿ ಒಗ್ಗಟ್ಟು ತೋರಿಸಿ ಸತ್ಕಾರ್ಯ ಮಾಡಿದಲ್ಲಿ ಗ್ರಾಮವೇ ಶಾಂತಿಯಿಂದ ಇರುತ್ತದೆ ಎಂಬುದಕ್ಕೆ ಈ ಅರೇಮಲ್ಲೇನಹಳ್ಳಿ ಗ್ರಾಮವೇ ಸಾಕ್ಷಿ ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ದೇವಾಲಯದ ಮುಖ್ಯಸ್ಥರಾದ ಎ.ಬಿ.ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ದೊಡ್ಡಾಘಟ್ಟ ಚಂದ್ರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ, ಹಾಲು ಉತ್ಪಾದಕರ ಸಹಕಾರ ಸಂಘಗಳ ತಾಲೂಕು ನಿರ್ದೇಶಕ ಸಿ.ವ. ಮಹಲಿಂಗಯ್ಯ, ಸುಬ್ರಮಣಿ ಶ್ರೀಕಂಠೇಗೌಡ, ಗುತ್ತಿಗೆದಾರ ತ್ಯಾಗರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ, ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎಚ್. ಧನಪಾಲ್, ನಿರ್ದೇಶಕ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ.ಆರ್.ಸುರೇಶ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಗೋವಿಂದಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೇಮಚಂದ್ರು ಸೇರಿ ಹಲವರು ಉಪಸ್ಥಿತರಿದ್ದರು.

ನೂತನ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ