ಹಾವೇರಿ: ಮಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಸಂಪೂರ್ಣ ಲಕ್ಷಣಗಳು ಗೋಚರಿಸುತ್ತಿದ್ದು, ಗ್ರಾಮೀಣ ಭಾಗದ ಕಾರ್ಮಿಕರು ದುಡಿಯಲು ಗುಳೆ ಹೋಗುವುದನ್ನು ತಪ್ಪಿಸಲು ತಕ್ಷಣವೇ ವಿಬಿ ಜಿರಾಮ್ಜಿ ಯೋಜನೆಯಡಿ ಕೆಲಸ ಪ್ರಾರಂಭಿಸಬೇಕೆಂದು ಜಿಲ್ಲಾ ಮಹಾತ್ಮಾ ಗಾಂಧೀಜಿ ಜಿಲ್ಲಾ ಕೂಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಜಿಪಂ ಸಿಇಒ ಅವರಲ್ಲಿ ಮನವಿ ಮಾಡಿದರು.
ಈಗಾಗಲೇ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಕೋರಿ ನಮೂನೆ ಸಲ್ಲಿಸಲಾಗಿದೆ. ಬರಗಾಲದ ಪರಿಸ್ಥಿತಿ ಇರುವುದರಿಂದ ಜನರಿಗೆ ತಕ್ಷಣವೇ ಕೆಲಸ ನೀಡದಿದ್ದರೆ ಬದುಕು ಕಟ್ಟಿಕೊಳ್ಳಲು ನಗರ ಪ್ರದೇಶಗಳಿಗೆ ಗುಳೆ ಹೋಗುವುದು ಅನಿವಾರ್ಯವಾಗುತ್ತದೆ.
ಗ್ರಾಮ ಪಂಚಾಯಿತಿ ಯುಕ್ತಧಾರದಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಸೇರ್ಪಡೆಗೊಳಿಸಲು ಮತ್ತು ಮಾರ್ಗಸೂಚಿ ಅನ್ವಯ ಸೂಕ್ತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕೃಷಿ ಇಲಾಖೆ ವತಿಯಿಂದ ರೈತರ ಜಮೀನಿನಲ್ಲಿ ನೀರು ಸಂರಕ್ಷಣೆ ಮಾಡುವ ಜಲಾನಯನ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಈ ಕಾಮಗಾರಿಗಳ ಪರಿಶೀಲನೆಗಾಗಿ ಸಿಇಒ ಅವರು ಸ್ವತಃ ಕ್ಷೇತ್ರ ಭೇಟಿ ನೀಡಬೇಕೆಂದು ವಿನಂತಿಸಲಾಯಿತು.ಇತ್ತೀಚೆಗೆ ರಾಣಿಬೆನ್ನೂರು ತಾಲೂಕಿನ ಸುಣಕಲ್ ಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಹೊಸಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಎನ್ಎಂಆರ್ ಕಾರ್ಮಿಕನ ಕುಟುಂಬಕ್ಕೆ ಜಿಪಂ ವತಿಯಿಂದ ಬರಬೇಕಾದ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮೆಟ್ಗಳಿಗೆ ಮುಂದಿನ ವಾರ ಒಂದು ದಿನದ ಸಂಪೂರ್ಣ ತರಬೇತಿ ಏರ್ಪಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಜಿಲ್ಲಾ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷೆ ಗುತ್ತೆಮ್ಮ ಸುಣಗಾರ, ಮುಖಂಡರಾದ ದಾದಾಪೀರ್ ತಿಳವಳ್ಳಿ, ಚನ್ನಬಸಪ್ಪ, ನಾಗಮ್ಮ ಮಲ್ಲಲ್ಲಿ, ರಾಮಣ್ಣ ದೊಡ್ಡಮನಿ, ಎಸ್.ಡಿ. ಬಳಿಗಾರ, ಹಾಲಪ್ಪ ಅಲ್ಲಾಪುರ ಇತರರು ಇದ್ದರು.