ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹಿಂದಿನ ಹೆಚ್ಚುವರಿ ವಿದ್ಯುತ್ ಬಾಕಿ ಮೊತ್ತವನ್ನು ಸರ್ಕಾರವೇ ಭರಿಸಬೇಕು. ೧೦ರಿಂದ ೨೦ ಎಚ್ಪಿ ಪವರ್ಲೂಮ್ ಮಗ್ಗಗಳ ಸರಾಗ ಕಾರ್ಯ ವಿರ್ವಹಣೆಗೆ ಯಾವುದೇ ಯುನಿಟ್ ಬಳಕೆಯ ಕಟ್ಟಳೆ ಹಾಕದೇ ಪ್ರತಿ ಯುನಿಟ್ಗೆ ₹೧.೨೫ ಪೈಸೆಯಂತೆ ದರ ಆಕರಣೆ ಮಾಡುವತ್ತ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದರೂ ಇದೂವರೆಗೆ ಈ ಬಗ್ಗೆ ಆದೇಶ ಹೊರಡಿಸಿಲ್ಲವಾದ್ದರಿಂದ ತಕ್ಷಣಕ್ಕೆ ಆರ್ಥಿಕ ಇಲಾಖೆಯಿಂದ ಮಾಹಿತಿ ಕ್ರೋಢೀಕರಿಸಿಕೊಂಡು ಆದೇಶ ಹೊರಡಿಸಬೇಕು. ಫೆ.೧೨ರಿಂದ ಬಜೆಟ್ ಅಧಿವೇಶನ ನಡೆಯಲಿದ್ದು, ಬಜೆಟ್ ಅಧಿವೇಶನದಲ್ಲಿಯೂ ನೇಕಾರರ ಅಭಿವೃದ್ಧಿಗೆ ಅನೇಕ ಯೋಜನೆಗಳ ಬಗ್ಗೆ ಚರ್ಚಿತ ವಿಷಯಗಳನ್ನು ಪ್ರಸ್ತಾಪಿಸಬೇಕು ಮತ್ತು ಅದಕ್ಕೆ ಸಮ್ಮತಿ ಪಡೆದು ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಬೇಕು. ನೇಕಾರರ ಬಾಕಿ ವಿದ್ಯುತ್ ಬಿಲ್ ಬಗ್ಗೆ ಇಂಧನ ಇಲಾಖೆಯ ಯಾವುದೇ ಅಧಿಕಾರಿಗಳು ನೇಕಾರರಿಗೆ ಒತ್ತಡ ಹಾಕಬಾರದು. ಆವಳಿ ಸಚಿವರು ರಾಜ್ಯದಲ್ಲಿ ಅವನತಿಯತ್ತ ಸಾಗುತ್ತಿರುವ ನೇಕಾರಿಕೆಯನ್ನು ಉಳಿಸಲು ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಿ ಜಾರಿಗೊಳಿಸಿ ನೇಕಾರಿಕೆ ಉಳಿಸಬೇಕೆಂದು ಮನವಿ ಸಲ್ಲಿಸಲಾಗಿದೆ.
ಬೆಂಗಳೂರು ಕಾಮಾಕ್ಷಿಪಾಳ್ಯ, ಗೊಟ್ಟಿಗೆರೆ ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ನೇಕಾರರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ವಿಜಯಪುರ ಮೊದಲಾದ ಪ್ರದೇಶಗಳ ನೇಕಾರರು ಯಾವುದೇ ಒತ್ತಡಕ್ಕೀಡಾಗದೇ ಬಾಕಿ ವಿದ್ಯುತ್ ಮೊತ್ತ ಪಾವತಿಸಬಾರದು. ಈ ಬಗ್ಗೆ ಸರ್ಕಾರ ನೇಕಾರ ಸಂಘಟನೆ ಜೊತೆಗೆ ಸಕಾರಾತ್ಮವಾಗಿ ಸ್ಪಂದಿಸಿದ್ದು, ಆದೇಶ ಹೊರಡಿಸುವ ಭರವಸೆ ನೀಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯಿದ್ದು, ಹುಸಿಯಾದಲ್ಲಿ ಸಂಘಟಿತರಾಗಿ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದ್ದರಿಂದ ಸಮಸ್ತ ನೇಕಾರರು ಸಂಘಟನೆ ಜೊತೆ ಕೈಜೋಡಿಸಲು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಕೋರಿದ್ದಾರೆ.