ಕನ್ನಡಪ್ರಭ ವಾರ್ತೆ ಸಂಕೇಶ್ವರ
2009 ರಿಂದ 2014ರವರೆಗೆ ಲೋಕಸಭಾ ಸದಸ್ಯರಾಗಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಹಾಕಿಕೊಂಡಿರುವ ರಮೇಶ ಕತ್ತಿ ಅವರು ಜನಪರ ಕಾಳಜಿ, ಜನಸ್ನೇಹಿ ಆಡಳಿತದ ಮೂಲಕ ಅಪಾರ ಜನಬೆಂಬಲ ಹೊಂದಿದ್ದಾರೆ. ಬಿಜೆಪಿ ವರಿಷ್ಠರು ಇವರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಈ ಬಾರಿ ಚಿಕ್ಕೋಡಿ ಲೋಕಸಭಾ ಟಿಕೆಟ್ ನೀಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ ಒತ್ತಾಯಿಸಿದರು.ಪಟ್ಟಣದ ಖಾಸಗಿ ಸಭಾ ಭವನದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭಾ ಟಿಕೆಟ್ ವಂಚಿತರಾದ ರಮೇಶ ಕತ್ತಿ ಪಕ್ಷದ ಆದೇಶಾನುಸಾರ ಪಕ್ಷ ನಿಷ್ಠೆ ತೋರುತ್ತಾ ಬಂದಿದ್ದಾರೆ. ಅಲ್ಲದೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೆ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ವಿಷಯ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಕತ್ತಿ ಕುಟುಂಬ ತನ್ನದೇ ಪ್ರಾಬಲ್ಯ ಹೊಂದಿದ್ದು ,ಈಗಾಗಲೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಮನವಿ ಸಲ್ಲಿಸಿದ್ದು, ಈ ಬಾರಿ ರಮೇಶ ಕತ್ತಿ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗುತ್ತದೆ ಎಂಬ ವಾತಾವರಣ ಎಲ್ಲಡೆ ನಿರ್ಮಾಣವಾಗಿದೆ. ಜಿಲ್ಲೆಯ ಎಲ್ಲ ನಾಯಕರು ಒಗ್ಗೂಡಿ ಅವರನ್ನು ಲೋಕಸಭೆಗೆ ಕಳಿಸುವ ಪ್ರಯತ್ನ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಅಮರ ನಲವಡೆ ಮಾತನಾಡಿದರು. ಪುರಸಭೆ ಸದಸ್ಯ ಸುನೀಲ ಪರ್ವತರಾವ, ಅಜಿತ್ ಕರಜಗಿ, ಸಂಜಯ ಶಿರಕೋಳಿ, ಮುಖಂಡ ಶ್ರೀಕಾಂತ ಹತನೂರಿ, ಶಂಕರರಾವ ಹೆಗಡೆ, ಅಪ್ಪಾಸಾಹೇಬ ಶಿರಕೋಳಿ, ಪ್ರಭುಗೌಡ ಪಾಟೀಲ,ಸಚಿನ್ ಹೆಗಡೆ, ಸುರೇಶ ಕುಲಕರ್ಣಿ,ಹರೂನ್ ಮುಲ್ಲಾ, ವಿಜಯ ಶೇರೆಖರ, ಸೇರಿದಂತೆ ಇತರರು ಇದ್ದರು.