ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ. ನಾಗಣ್ಣ ಗೌಡ

KannadaprabhaNewsNetwork | Published : Jun 19, 2025 12:35 AM

ವಸತಿನಿಲಯಗಳಲ್ಲಿ ಒಂದೆಡೆ ಎಲ್ಲರಿಗೂ ಗೋಚರಿಸುವಂತೆ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ದೊಡ್ಡದಾಗಿ ಬರೆಸಬೇಕು.

ವಸತಿ ಶಾಲೆಗಳಲ್ಲಿ ಸಹಾಯವಾಣಿ ದೊಡ್ಡದಾಗಿ ಬರೆಸಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಸೂಚನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಸತಿನಿಲಯಗಳಲ್ಲಿ ಒಂದೆಡೆ ಎಲ್ಲರಿಗೂ ಗೋಚರಿಸುವಂತೆ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ದೊಡ್ಡದಾಗಿ ಬರೆಸಬೇಕು. ಪೋಕ್ಸೋ ಮತ್ತು ಬಾಲ್ಯ ವಿವಾಹ ಕುರಿತಂತೆ ನೀತಿ ಶಿಕ್ಷಣ ಹೇಳಬೇಕು. ಮುಖ್ಯವಾಗಿ ಹೆಣ್ಣುಮಕ್ಕಳ ವಸತಿನಿಲಯಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ನಾಗಣ್ಣ ಗೌಡ ಸೂಚಿಸಿದರು.

ನಗರದ ಕೋಟೆ ಪ್ರದೇಶದ ಬಾಲಕಿಯರ ವಸತಿ ನಿಲಯ, ವಿದ್ಯಾನಗರದ ನಂದ ವಸತಿ ಶಾಲೆ, ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ತಾಳೂರು ರಸ್ತೆಯ ಬಾಲಭಾರತಿ ಕೇಂದ್ರಿಯ ವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ತಿಳಿಸಿದರು.

ಶಾಲೆ ಮತ್ತು ವಸತಿ ನಿಲಯಗಳಲ್ಲಿ ಗ್ರಾಮೀಣ ಭಾಗದಿಂದ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಪೂರಕ ವಾತಾವರಣ ಕಲ್ಪಿಸಬೇಕು. ಅವರಲ್ಲಿ ಶಿಕ್ಷಣದ ಬೇಸಾಯ ಕೈಗೊಳ್ಳಬೇಕು. ಮಕ್ಕಳ ಉತ್ತಮ ಜೀವನ ರೂಪಿಸಿಕೊಳ್ಳಲು ವಸತಿನಿಲಯಗಳು ಪೂರಕವಾಗಿದ್ದು, ಇಲ್ಲಿ ಅವರಿಗೆ ಸ್ನೇಹಮಯಿ ವಾತಾವರಣ ರೂಪಿಸಬೇಕು ಎಂದರು.

ಅನುತ್ತೀರ್ಣರಾದ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಅವರು ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆಯೇ? ಅಥವಾ ಬಾಲ್ಯ ವಿವಾಹವಾಗಿದ್ದಾರೆಯೇ? ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಅನುತ್ತೀರ್ಣರಾಗಿದ್ದಲ್ಲಿ, ಬಾಲ್ಯವಿವಾಹ ನಡೆಯುವ ಸಾಧ್ಯತೆ ಹೆಚ್ಚು ಇರುತ್ತದೆ. ಕಠಿಣ ಎನಿಸುವ ವಿಷಯಗಳ ಕುರಿತು ಮಕ್ಕಳಿಗೆ ಹೆಚ್ಚಿನ ಬೋಧನೆಗೆ ಶಿಕ್ಷಕರು ಮುತುವರ್ಜಿ ವಹಿಸಲು ತಿಳಿಸಬೇಕು ಎಂದರು.

ವಸತಿನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ, ಅಗತ್ಯ ಸಿಬ್ಬಂದಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಿರಿ. ಈ ಕುರಿತು ಆಯುಕ್ತರ ಜೊತೆ ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಸರ್ಕಾರದ ನಿಯಮಗಳಡಿ ಕಾರ್ಯನಿರ್ವಹಿಸಿ:

ಬಳಿಕ ವಿದ್ಯಾನಗರದ ನಂದ ವಸತಿ ಶಾಲೆಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸುವ ಸುತ್ತೋಲೆ ನಿಯಮಗಳನ್ವಯ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಖಾಸಗಿ ಶಾಲೆಗಳು ಆಡಳಿತಾತ್ಮಕ, ಅಕಾಡೆಮಿ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಾರ್ಯನಿರ್ವಹಿಸಬೇಕು. ಶಾಲಾ ಶುಲ್ಕಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಶುಲ್ಕಗಳ ಸುತ್ತೋಲೆಗಳನ್ನು ಹೊರಡಿಸಬೇಕು. ಇವುಗಳ ಪ್ರತಿ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಗಳಿಗೆ ನೀಡಬೇಕು. ಶುಲ್ಕ ವಸೂಲಿ ಸಂಬಂಧಿಸಂತೆ ಪೋಷಕರ ಜೊತೆ ಚರ್ಚಿಸಬೇಕು. ಮಕ್ಕಳ ಗಮನಕ್ಕೆ ತಂದು, ವಿನಾಕಾರಣ ಕಿರುಕುಳ ನೀಡಿದಲ್ಲಿ ಅದು ಅಪರಾಧವಾಗುತ್ತದೆ ಎಂದು ತಿಳಿಸಿದರು.

ಶಾಲೆಯಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳಾದ 1098 ಮತ್ತು 112 ಬರೆಸಬೇಕು. ಅಹವಾಲು ಪೆಟ್ಟಿಗೆಯನ್ನು ಸಿಸಿ ಟಿವಿ ಇರುವ ಜಾಗದಲ್ಲಿ ಅಳವಡಿಸಿ ಅವರಿಗೆ ದೂರು ನೀಡಲು ಭಯ ಪಡುವ ಹಾಗೆ ಮಾಡಬಾರದು. ಬೋಧನೆಗೆ ನೇಮಿಸಿಕೊಳ್ಳುವ ಶಿಕ್ಷಕರ ಅರ್ಹತೆ, ಸೇವಾನುಭಾವ ಹಾಗೂ ಅರ್ಹತೆಗಳು ಕಡ್ಡಾಯವಾಗಿರಬೇಕು. ಮುಖ್ಯವಾಗಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಕುರಿತು ಪೊಲೀಸ್ ಪರಿಶೀಲನೆಯಾಗಿರಬೇಕು ಎಂದು ಸೂಚಿಸಿದರು.

ಶಾಲೆಗಳು ಮಕ್ಕಳಿಗೆ ಸ್ನೇಹಮಯಿಯಾಗಿರಬೇಕು. ನಿಯಮಿತವಾಗಿ ಪೋಷಕರ ಸಭೆ ನಡೆಸಬೇಕು. ಶಾಲಾ ವಾಹನಗಳು ಸುಸ್ಥಿತಿಯಲ್ಲಿರಬೇಕು. ಈ ಕುರಿತು ವಾಹನ ಚಾಲಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಶಾಲೆ ನಡೆಸುವ ಅರ್ಹತೆ ನವೀಕರಣ ಮಾಡಿಕೊಳ್ಳುತ್ತಿರಬೇಕು. ಸಂಜೆ ವೇಳೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳಿಗಾಗಿ ಕೋಚಿಂಗ್ ನಡೆಸುತ್ತಿದ್ದರೆ ಕಡ್ಡಾಯವಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಬಳಿಕ ಅಧ್ಯಕ್ಷರು ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ, ಅಲ್ಲಿನ ಶಾಲೆಯ ಮೈದಾನ ಸೂಕ್ತ ನಿರ್ವಹಣೆಗೆ ನಿರ್ದೇಶನ ನೀಡಿದರು. ಶಾಲೆಗಳನ್ನು ಪರೀಕ್ಷೆ ಮೌಲ್ಯಮಾಪನ, ಚುನಾವಣೆ ಮತ್ತು ಇತರೆ ಕಾರ್ಯಗಳಿಗಾಗಿ ಬಳಸಿಕೊಂಡಾಗ, ಮೂಲ ಸ್ಥಿತಿಯಲ್ಲಿದ್ದಂತೆಯೇ ಇರಬೇಕು ಎಂದು ಅವರಿಗೆ ತಿಳಿಸಬೇಕು, ಇದರಿಂದ ಶಾಲೆಗಳು ಅಂದಗೆಡುವುದಿಲ್ಲ ಮತ್ತು ಯಾವುದೇ ಶಾಲಾ ವಸ್ತುಗಳು ಹಾನಿಯಾಗುವುದಿಲ್ಲ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕಿ ಮಮತಾ, ವಸತಿ ನಿಲಯಪಾಲಕಿ ಉಷಾಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಬಿಇಒ ಸಿದ್ಧಲಿಂಗಮೂರ್ತಿ, ಸಿಆರ್‌ಪಿ ಸಿದ್ದಪ್ಪ, ನಂದ ವಸತಿ ಶಾಲೆಯ ಪ್ರಾಂಶುಪಾಲೆ ಸರಿತಾ, ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ಹಾಜರಿದ್ದರು.