ನಮ್ಮ ಪ್ರತಿ ಕಾರ್ಯದಲ್ಲೂ ಭಗವಂತ ಇರುತ್ತಾನೆ

KannadaprabhaNewsNetwork |  
Published : Apr 27, 2026, 01:15 AM IST
 | Kannada Prabha

ಸಾರಾಂಶ

ಕುದೂರು: ಮನೆ ಮತ್ತು ಮಠಗಳನ್ನು ನಮಗೆ ಖುಷಿ ನೀಡುವಂತೆ ಕಟ್ಟಿಕೊಳ್ಳುವಂತೆ ದೇವಾಲಯಗಳನ್ನು ಚಂದವಾಗಿ ಕಟ್ಟಬೇಕು. ದೇವಾಲಯಗಳಿಗೆ ಇಂದಿನ ಮಕ್ಕಳು ಮತ್ತು ಯುವಕರು ಆಕರ್ಷಿತರಾಗುವಂತೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು

ಕುದೂರು: ಮನೆ ಮತ್ತು ಮಠಗಳನ್ನು ನಮಗೆ ಖುಷಿ ನೀಡುವಂತೆ ಕಟ್ಟಿಕೊಳ್ಳುವಂತೆ ದೇವಾಲಯಗಳನ್ನು ಚಂದವಾಗಿ ಕಟ್ಟಬೇಕು. ದೇವಾಲಯಗಳಿಗೆ ಇಂದಿನ ಮಕ್ಕಳು ಮತ್ತು ಯುವಕರು ಆಕರ್ಷಿತರಾಗುವಂತೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಾಗಡಿ ತಾಲೂಕು ಮಾದಿಗೊಂಡನಹಳ್ಳಿಯ ಶ್ರೀ ಗುಡ್ಡದ ರಂಗನಾಥಸ್ವಾಮಿ ನೂತನ ದೇವಾಲಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶ್ರೀಗಳು, ನೀರು ಎಂದಿಗೂ ನೀರಿಗಾಗಿಯೇ ಬದುಕುವುದಿಲ್ಲ. ನೀರು ಬೇಕಾಗಿರುವುದು ಬಾಯಾರಿಕೆ ಆದವರಿಗೆ, ಕೊಳೆಯಾದವರಿಗೆ, ತಂಪು ಬೇಕೆಂದವರಿಗೆ, ಹಾಗೆಯೇ ದೇವರು ಕೂಡಾ ನಮಗಾಗಿ ಇರುತ್ತದೆಯೇ ಹೊರತು ದೇವರೇ ಬಂದು ಭಕ್ತರಲ್ಲಿ ದೇವಾಲಯ ನಿರ್ಮಿಸಿಕೊಡಿ ಎಂದು ಕೇಳುವುದಿಲ್ಲ. ನಮ್ಮ ಪ್ರತಿ ಕಾರ್ಯದಲ್ಲೂ ಭಗವಂತ ಇರುತ್ತಾನೆ ಎಂದು ಉಸಿರಾಟದಂತೆ ಆತನ ಸ್ಮರಣೆ ಮಾಡುತ್ತಿದ್ದರೆ ಆತನ ಅನುಭೂತಿ ನಮಗಾಗುತ್ತದೆ ಎಂದು ತಿಳಿಸಿದರು.

ಪಾಲನಹಳ್ಳೀ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರಾಷ್ಟ್ರಪ್ರಜ್ಞೆಯನ್ನು ಪ್ರತಿಯೊಬ್ಬರು ಹೆಚ್ಚು ಮಾಡಿಕೊಳ್ಳಬೇಕು. ಅಕ್ಷಯ ತೃತೀಯವನ್ನು ಬಸವಜಯಂತಿಯಂದು ಆಚರಿಸಲಾಗುತ್ತದೆ. ಕೇವಲ ಚಿನ್ನವನ್ನು ತೆಗೆದುಕೊಳ್ಳುವುದರಿಂದ ಅಕ್ಷಯವಾಗುವುದಿಲ್ಲ. ಬದಲಾಗಿ ಚಿನ್ನದಂತಹ ಮನಸನ್ನು ರೂಢಿಸಿಕೊಳ್ಳಬೇಕು. ಆಗ ಸಂತೋಷ ನೆಮ್ಮದಿ ಅಕ್ಷಯವಾಗುತ್ತದೆ ಎಂದು ಹೇಳಿದರು.

ಕಳ್ಳೀಪಾಳ್ಯ ಭಕ್ತಮುನೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ಶ್ರೀ ರಂಗನಾಥಾನಂದ ಸ್ವಾಮೀಜಿ ಮಾತನಾಡಿ, ಗುಡ್ಡದ ರಂಗನಾಥಸ್ವಾಮಿ ಸನ್ನಿಧಾನ ಆಧ್ಯಾತ್ಮಿಕ ಅನುಭೂತಿಯನ್ನು ಉಂಟು ಮಾಡುತ್ತಿದೆ. ಇಲ್ಲಿ ಗುರುಪೀಠದ ರಾಮಸ್ವಾಮಿ ಮತ್ತು ದೇವಾಲಯ ಸಮಿತಿ ಮಾಡುತ್ತಿರುವ ಸೇವೆಗೆ ಆದಷ್ಟು ಬೇಗನೆ ನೂತನ ದೇವಾಲಯ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಗುರುಪೀಠದ ಮುಖ್ಯಸ್ಥ ರಾಮಸ್ವಾಮಿ ಮಾತನಾಡಿ, ಅನುಭವ ಮತ್ತು ಅಧ್ಯಯನ ಇಲ್ಲದೆ ಹೊರಡುವ ಮಾತುಗಳಲ್ಲಿ ಮತ್ತು ನಡವಳಿಕೆಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳುತ್ತಾ ಮುನ್ನಡೆಯಬೇಕು. ಏಕೆಂದರೆ ಅನುಮಾನ ಪೆದ್ದರೋಗ, ಅದು ನಮ್ಮಗಳನ್ನು ಯಾವುದೇ ಕ್ಷೇತ್ರದಲ್ಲಿ ಬೆಳವಣಿಗೆ ಆಗುವುದಕ್ಕೆ ಬಿಡುವುದಿಲ್ಲ. ನಂಬಿಕೆಯೇ ದೇವರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣಾಶ್ರಮದ ಸೋಮನಾಥ ಸ್ವಾಮೀಜಿ, ಪಡವಗೆರೆ ಶ್ರೀ ನಾರಾಯಣಾಚರ‍್ಯರು, ಕೃಷ್ಣಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶಿವಲಿಂಗಯ್ಯ, ರಾಮಸ್ವಾಮಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್, ಶಿಕ್ಷಕ ರಂಗಶಾಮಯ್ಯ, ನರಸಿಂಹಮೂರ್ತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಹಂಸಕುಮಾರಿ ಜಯರಾಮಯ್ಯ, ಮಾಗಡಿ ತಾಲೂಕು ಅರ್ಚಕ ಸಂಘದ ಅಧ್ಯಕ್ಷ ಪಾಳ್ಯದಹಳ್ಳಿ ಕೃಷ್ಣಪ್ಪ ಭಾಗವಹಿಸಿದ್ದರು.

ಫೋಟೋ :

ಮಾಗಡಿ ತಾಲೂಕು ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ನೂತನ ದೇವಾಲಯ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ದೇವಾಲಯದ ಅಡಳಿತ ಮಂಡಳಿಯವರು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆವಿಷ್ಕಾರಗಳತ್ತ ಹೆಜ್ಜೆ ಇಡಲು ಅವಕಾಶ ಸದ್ಬಳಸಿಕೊಳ್ಳಿ
ಜನರ ಆಶೋತ್ತರಗಳಿಗೆ ಪಂಚಾಯತ್‌ ವ್ಯವಸ್ಥೆ ದನಿಯಾಗಲಿ