ಗೋಣಿಕೊಪ್ಪ: 11ರಂದು ರಾಜ್ಯ ಮಟ್ಟದ ದಸರಾ ಬಹುಭಾಷಾ ಕವಿಗೋಷ್ಠಿ

KannadaprabhaNewsNetwork | Published : Oct 3, 2024 1:21 AM

ಸಾರಾಂಶ

ಈ ಬಾರಿಯ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ, ಹೀಗೆ 13 ಭಾಷೆಯ ಕವನಗಳನ್ನು ಕನ್ನಡ, ಹಿಂದಿ,ಇಂಗ್ಲಿಷ್, ತಮಿಳು, ಮಲೆಯಾಳಂ, ಮರಾಠಿ 78 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ನಾಲ್ವರು ಕವಿಗಳು ಕನ್ನಡ ಭಾಷೆಯ ಚುಟುಕು ಕವನ ವಾಚಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಗೋಣಿಕೊಪ್ಪ ದಸರಾ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ 11ರಂದು ಬೆಳಗ್ಗೆ 10 ಗಂಟೆಗೆ ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ, ಹೀಗೆ 13 ಭಾಷೆಯ ಕವನಗಳನ್ನು ಕನ್ನಡ, ಹಿಂದಿ,ಇಂಗ್ಲಿಷ್, ತಮಿಳು, ಮಲೆಯಾಳಂ, ಮರಾಠಿ 78 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ನಾಲ್ವರು ಕವಿಗಳು ಕನ್ನಡ ಭಾಷೆಯ ಚುಟುಕು ಕವನ ವಾಚಿಸಲಿದ್ದಾರೆ.ಮಕ್ಕಳ ಪ್ರತಿಭೆ ಗುರುತಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಕವನಗೋಷ್ಠಿ (6-13 ವಯೋಮಿತಿ) ಏರ್ಪಡಿಸಲಾಗಿದೆ. 11 ಬಾಲ ಪ್ರತಿಭೆಗಳು ಕವನ ವಾಚನ ಮಾಡಲಿದ್ದಾರೆ ಎಂದರು.

ಕನ್ನಡದಲ್ಲಿ 6 ಮತ್ತು ಇಂಗ್ಲೀಷಿನಲ್ಲಿ 5 ಬಾಲ ಕವಿಗಳು ಕವನ ವಾಚನ ಮಾಡಲಿದ್ದಾರೆ.

ಕವಿಗೋಷ್ಠಿಗೆ ಆಗಮಿಸುವ ಎಲ್ಲಾ ಕವಿಗಳಿಗೂ ಗೌರವ ಸಮರ್ಪಣೆ, ಸಂಭಾವನೆ ಮತ್ತು ಕೊಡಗಿನ ಲೇಖಕರ ಒಂದು ಪುಸ್ತಕ ನೀಡಲಾಗುವುದು.

ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಬೆಳಗಾವಿ, ಮೈಸೂರು ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಕವನ ಕಳುಹಿಸಿದ್ದಾರೆ.

ಜಿಲ್ಲೆಯ ಸಾಹಿತಿ ಉಳುವಂಗಡ ಕಾವೇರಿ ಉದಯ ಅಂಕಣಕಾರರಾಗಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ 67 ಲೇಖನಗಳನ್ನು ಪುಸ್ತಕ ರೂಪದಲ್ಲಿ ‘ಲೇಖನ ಸೌರಭ’ಹೆಸರಿನಲ್ಲಿ ಪ್ರಕಟಿಸಿದ್ದು, ಅದರ ಬಿಡುಗಡೆ ನಡೆಯಲಿದೆ.

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷರು ಹಾಗೂ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಶ್ರೀ ಕಾವೇರಿ ದಸರಾ ಸಮಿತಿ ನಾಡಿನ ಸಾಹಿತ್ಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ 10 ದಿನಗಳ ಕಾಲ ಪ್ರತಿದಿನವೂ ದೇವಿಯ ಪ್ರತಿಷ್ಠಾಪನೆಯೊಂದಿಗೆ ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದರು.

ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕೋಳೆರ ದಯ ಚಂಗಪ್ಪ ಮಾಕನಡಿ, ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಹಿರಿಯ ಪತ್ರಕರ್ತ ಜೀವನ್ ಚಿಣ್ಣಪ್ಪ ಉದ್ಘಾಟಿಸುವರು. ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಅತಿಥಿಯಾಗಿ ಪಾಲ್ಗೊಳ್ಳುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿತ್‌ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕವಿಗೋಷ್ಠಿ ಸಮಿತಿ ಸಂಚಾಲಕಿ ಎಸ್.ಎಂ ರಜಿನಿ, ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ, ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾದೇವಯ್ಯ ಉಪಸ್ಥಿತರಿರುತ್ತಾರೆ ಎಂದರು.

ಬಹುಭಾಷಾ ಕವಿಗೋಷ್ಠಿಯ ಸಂಚಾಲಕಿ ಎಸ್.ಎಂ ರಜನಿ ಮಾತನಾಡಿ, ಈ ಬಾರಿ 130 ಕವನಗಳು ಅಂಚೆ, ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಬಂದಿದ್ದು ಆಯ್ಕೆ ಸಮಿತಿ 80 ಕವಿಗಳ ಕವಿತೆಗಳನ್ನು, ನಾಲ್ಕು ಚುಟುಕು ಕವನಗಳನ್ನು ಆರಿಸಿದೆ. ಈ ಬಾರಿ ಕನ್ನಡ ಭಾಷೆಯ 40 ಕವನಗಳು ಬಂದಿದ್ದು ಕನ್ನಡ ಉಪಭಾಷೆಗಳಾದ ಕೊಡವ ಭಾಷೆಯ 10 ಕವನಗಳು,ಅರೆ ಭಾಷೆಯ 5 ಕವನಗಳು, ಎರವ ಭಾಷೆಯ 5 ಕವನಗಳು, ತುಳು ಭಾಷೆಯ 4 ಕವನಗಳು, ಕುಂಬಾರ ಭಾಷೆಯ 2 ಕವನಗಳು, ಕೊಂಕಣಿ ಭಾಷೆಯ 1 ಕವನ, ಬ್ಯಾರಿ ಭಾಷೆಯ 1ಕವನ ಅಲ್ಲದೆ ಹಿಂದಿ ಭಾಷೆಯ 3 ಕವನಗಳು, ಮರಾಠಿ ಭಾಷೆಯ 2 ಕವನಗಳು ತಮಿಳು ಭಾಷೆಯ 2 ಕವನಗಳು ಮತ್ತು ಮಲಯಾಳಂ ಭಾಷೆಯ 2 ಕವನಗಳು ಹಾಗೂ ಇಂಗ್ಲಿಷ್ ಭಾಷೆಯ 1 ಕವನಗಳ ವಾಚನವನ್ನು ಕವಿಗಳು ಮಾಡಲಿದ್ದಾರೆ‌ ಎಂದರು.

ಸಮತಿ ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿ ಟಿ.ಆರ್‌. ವಿನೋದ್‌, ನಿರ್ದೇಶಕರಾದ ಚಂದನಾ ಮಂಜುನಾಥ್, ಚಂದನ್ ಕಾಮತ್, ಮಹೇಶ್, ಓಮನ,ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ ಇದ್ದರು.

Share this article