ಉತ್ತಮ ಆಡಳಿತ ಮೋದಿ ಗ್ಯಾರಂಟಿ

KannadaprabhaNewsNetwork | Published : Apr 7, 2024 1:48 AM

ಸಾರಾಂಶ

ದೇಶದ ಜನರಿಗೆ ಮೂಲಭೂತ ಸೌಕರ್ಯ, ಆರ್ಥಿಕ ಸದೃಢತೆ ಜತೆಗೆ ಒಳ್ಳೆಯ ಆಡಳಿತವನ್ನು ಮೋದಿ ಸರ್ಕಾರ ನೀಡುತ್ತಿದೆ. ದೇಶದಲ್ಲಿ ಸಾಮಾನ್ಯ ಪ್ರಜೆಯು ಜನ್‌ಧನ್ ಖಾತೆ ತೆರೆಯಬೇಕು.

ಅಳ್ನಾವರ:

ಕೇಂದ್ರ ಸರ್ಕಾರದ ಸಂಕಲ್ಪದಂತೆ ಮುಂಬರುವ ಒಂದೂವರೆ ವರ್ಷದೊಳಗಡೆ ಪ್ರಗತಿಯಲ್ಲಿರುವ ₹ 1400 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು ಮಲಪ್ರಭಾ ನದಿಯ ಮೂಲಕ ಜಿಲ್ಲೆಯ ಪ್ರತಿಯೊಂದು ಮನೆಗೂ ಜೆಜೆಎಂ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಸಮೀಪದ ಮುಗದ ಗ್ರಾಮದಲ್ಲಿ ಆಯೋಜಿಸಿದ್ದ ಚುನಾಚಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ದೇಶದ ಬಡತನದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದ್ದು ಮುಂಬರು ೧೦ ವರ್ಷದ ಅವಧಿಯಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಕಾರ್ಯ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ ಎಂದರು.

ದೇಶದ ಜನರಿಗೆ ಮೂಲಭೂತ ಸೌಕರ್ಯ, ಆರ್ಥಿಕ ಸದೃಢತೆ ಜತೆಗೆ ಒಳ್ಳೆಯ ಆಡಳಿತವನ್ನು ಮೋದಿ ಸರ್ಕಾರ ನೀಡುತ್ತಿದೆ. ದೇಶದಲ್ಲಿ ಸಾಮಾನ್ಯ ಪ್ರಜೆಯು ಜನ್‌ಧನ್ ಖಾತೆ ತೆರೆಯಬೇಕು ಮತ್ತು ಪ್ರತಿಯೊಂದು ಯೋಜನೆಯು ನಿಜವಾದ ಫಲಾನುಭವಿಗೆ ತಲುಪಬೇಕು ಎನ್ನುವುದು ಬಿಜೆಪಿ ಆಡಳಿತದ ಮೂಲಮಂತ್ರವಾಗಿದೆ ಎಂದ ಜೋಶಿ, ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿ ದೇಶದ ಜನರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಿದ್ದು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದ ಜನರ ಆಶೀರ್ವಾದದಿಂದ ಕೇಂದ್ರ ಸಚಿವ ಸ್ಥಾನದಲ್ಲಿರುವ ನಾನು ಕೇವಲ ಉದ್ರೀ ಭಾಷಣ ಮಾಡಿ ಹೋಗುವ ವ್ಯಕ್ತಿಯಲ್ಲ. ಜನರ ಸೇವೆಯನ್ನು ಕಾಯಕವನ್ನಾಗಿಸಿಕೊಂಡು ಎಲ್ಲರನ್ನು ಸಮಾನವಾಗಿ ಕಾಣುವ ವ್ಯಕ್ತಿತ್ವ ನನ್ನದಾಗಿದೆ ಎಂದ ಅವರು, ಈ ಹಿಂದೇ ದೇಶದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುತ್ತಿದ್ದವು. ಆದರೆ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎಲ್ಲರ ಕೈ-ಬಾಯಿಗಳು ಬಂದ್ ಆಗಿವೆ ಎಂದರು.

ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಕಲ್ಮೇಶ ಬೇಲೂರ, ಈರಣ್ಣ ಜಡಿ, ಮಂಜುನಾಥ ಶರೆಮನಿ, ಹಣಮಂತ ಕೋಟಬಾಗಿ, ಕಲ್ಲಪ್ಪ ಹಟ್ಟಿ, ಶಿವಾಜಿ ಡೊಳ್ಳಿನ, ಐ.ಸಿ. ಗೋಕುಲ,ಶಂಕರಪ್ಪ, ನಾಗೇಂದ್ರ ಕೊಂಪಣ್ಣವರ, ಯಲ್ಲಾರಿ ಹುಬ್ಬಳ್ಳಿಕರ, ಶಂಕರ ಬಸವರೆಡ್ಡಿ, ಪ್ರವೀಣ ಪವಾರ, ಗುರುರಾಜ ನರಗುಂದ ಇದ್ದರು.

Share this article