ಯಣ್ಣಿ ವಡಗೇರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ

KannadaprabhaNewsNetwork |  
Published : Apr 07, 2024, 01:48 AM IST
ಕೊಡೇಕಲ್ ಸಮೀಪದ ಯಣ್ಣಿವಡಿಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ನೀರಿನ ಗುಮ್ಮಿಗಳ ಮುಂದೆ ನೀರು ಪಡೆಯಲು ಸಾಲುಗಟ್ಟಿ ನಿಂತಿರುವ ಜನತೆ. | Kannada Prabha

ಸಾರಾಂಶ

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಎಲ್ಲಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದ್ದು , ದಿನಬಳಕೆಯ ನೀರಿಗಾಗಿ ಪರದಾಡುವ ದುಸ್ಥಿತಿ ಬಂದಿದೆ. ಪ್ರತಿನಿತ್ಯವೂ ನೀರಿನ ಬವಣೆಯಿಂದಾಗಿ ಜನತೆ ರಾತ್ರಿ ಹೊತ್ತು ನಿದ್ರೆಯನ್ನು ಮಾಡದ ಸ್ಥಿತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಕೊಡೇಕಲ್

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಎಲ್ಲಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದ್ದು , ದಿನಬಳಕೆಯ ನೀರಿಗಾಗಿ ಪರದಾಡುವ ದುಸ್ಥಿತಿ ಬಂದಿದೆ. ಪ್ರತಿನಿತ್ಯವೂ ನೀರಿನ ಬವಣೆಯಿಂದಾಗಿ ಜನತೆ ರಾತ್ರಿ ಹೊತ್ತು ನಿದ್ರೆಯನ್ನು ಮಾಡದ ಸ್ಥಿತಿ ಎದುರಾಗಿದೆ.

ಕೊಡೇಕಲ್ ಹೋಬಳಿ ವಲಯದ ಯಣ್ಣಿ ವಡಿಗೇರಿ ಗ್ರಾಮಸ್ಥರು ಒಂದು ಕೊಡ ನೀರು ಪಡೆಯಲು ರಾತ್ರಿಯೆಲ್ಲ ಚಾತಕಪಕ್ಷಿಯಂತೆ ಕಾಯುವ ಸ್ಥಿತಿಯನ್ನು ಅನುಭವಿಸುವಂತಾಗಿದೆ. ಅಂದಾಜು 2 ಸಾವಿರಕ್ಕಿಂತಲು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಯಣ್ಣಿವಡಿಗೇರಿ ಗ್ರಾಮದಲ್ಲಿ ಜಲಮೂಲಗಳಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ಕುಸಿತವಾಗುತ್ತಿರುವ ಕಾರಣ ಗ್ರಾಮದ ಜನತೆ ನೀರಿಗಾಗಿ ಬವಣೆಯನ್ನು ಪಡುತ್ತಿದ್ದಾರೆ.

ಅಂತರ್ಜಲಮಟ್ಟ ಕುಸಿತ: ಗ್ರಾಮದ ಜನತೆಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ಪುರಾತನ ಕಾಲದ ಸೇದಿಬಾವಿಯಲ್ಲಿ ಅಂತರ್ಜಲಮಟ್ಟ ಕುಸಿತವಾಗಿತ್ತು. ಕಾರಣ, ನಾಲ್ಕು ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಬಾವಿಯೊಂದನ್ನು ತೋಡಿ, ಬಾವಿಯಿಂದ ಪೈಪ್‌ಲೈನ ಮಾಡುವ ಮೂಲಕ ಗುಮ್ಮಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಆದರೆ, ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯ ಕಾರಣದಿಂದಾಗಿ ಗುಮ್ಮಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗದೆ ಹೋದರೆ, ಇನ್ನೊಂದಡೆ ಬಾವಿಯಲ್ಲಿ ನೀರು ತುಂಬಿಕೊಳ್ಳುವರೆಗೆ ಗ್ರಾಮದ ಜನತೆ ಒಂದು ಬಿಂದಿಗೆ ನೀರು ಪಡೆಯಲು ಗುಮ್ಮಿಗಳ ಮುಂದೆ ಹರಸಾಹಸ ಪಡುವಂತಾಗಿದೆ.

ನಿತ್ಯ ಜಾಗರಣೆ: ವಿದ್ಯುತ್ ಇದ್ದ ಸಂದರ್ಭದಲ್ಲಿ ಬೆಳಗ್ಗೆ ಗುಮ್ಮಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ ಆದರೆ ಗ್ರಾಮೀಣ ಭಾಗದಲ್ಲಿ ಮೆಲಿಂದ ಮೇಲೆ ವಿದ್ಯುತ್ ಕಡಿತಗೊಳ್ಳುವ ಕಾರಣದಿಂದಾಗಿ ಗ್ರಾಮದ ಜನತೆ ಹಗಲು ರಾತ್ರಿಯೆನ್ನದೆ ಗುಮ್ಮಿಗಳ ಮುಂದೆ ಕೊಡಗಳನ್ನು ಇಟ್ಟುಕೊಂಡು ಕಾಯಬೇಕಾದ ಅನಿವರ‍್ಯತೆಯನ್ನು ಎದುರಿಸುವಂತಾಗಿದೆ.

ಇದರಿಂದಾಗಿ ನಿತ್ಯ ಹೊಲ ಮನೆ ಕೆಲಸಗಳಿಗೆ ತೆರಳುವ ಗ್ರಾಮದ ಜನತೆ ನೀರು ತರುವ ಒತ್ತುಗಾಡಿಗಳನ್ನು ಗುಮ್ಮಿಗಳ ಮುಂದೆ ನಿಲ್ಲಿಸಿ ಮನೆಯಲ್ಲಿರುವ ಹಿರಿಯರನ್ನು ಗುಮ್ಮಿಗಳ ಮುಂದೆ ಕೂಡಿಸಿ ಕೆಲಸಕ್ಕೆ ತೆರಳುತ್ತಾರೆ ಒಂದು ವೇಳೆ ಸಂಜೆ ವರೆಗೂ ಕರೆಂಟ್ ಬರದಿದ್ದರೆ ಇಡಿ ರಾತ್ರಿ ಗ್ರಾಮದ ಜನತೆ ಗುಮ್ಮಿಗಳ ಮುಂದೆ ನೀರು ಪಡೆಯಲು ನಿದ್ದೆಯನ್ನು ಮಾಡದೆ ಜಾಗರಣೆಯನ್ನು ಮಾಡಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮದ ಹಿರಿಯರಾದ ಯಮನಪ್ಪ, ಧರೆಪ್ಪ .

ಇದ್ದೂ ಇಲ್ಲದಂತಿರುವ ಆರ್.ಓ. ಪ್ಲಾಂಟ್: ಗ್ರಾಮದಲ್ಲಿರುವ ನೀರು ಶುದ್ಧೀಕರಣ ಘಟಕ ಇದ್ದರೂ ಕೂಡಾ ಇಲ್ಲಂದಾಗಿರುವುದು ಜನರಿಗೆ ಇನ್ನಿಲ್ಲದ ಸಮಸ್ಯೆಯನ್ನು ಉಂಟು ಮಾಡುತ್ತಿದೆ, ದಿನದ 24 ಗಂಟೆಗಳ ಕಾಲ ನೀರು ಕೊಡಬೇಕಾಗಿರುವ ಶುದ್ಧೀಕರಣ ಘಟಕದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿ ನಿರ್ಲಕ್ಷ್ಯದಿಂದಾಗಿ ಶುದ್ಧ ಕುಡಿಯುವ ನೀರು ಕೂಡಾ ಯಣ್ಣಿವಡಿಗೇರಿ ಗ್ರಾಮದ ಜನತೆಗೆ ಸಿಗದಂತಾಗಿದೆ.

ಗಮನ ಹರಿಸದ ಗ್ರಾ.ಪಂ: ಕಳೆದ ಹಲವು ವರ್ಷಗಳಿಂದ ಯಣ್ಣಿವಡಿಗೇರಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ವಿಷಯ ಗೊತ್ತಿರುವ ಗ್ರಾ.ಪಂನವರು ಮಾತ್ರ ಇದಕ್ಕೂ ನಮಗೂ ಯಾವುದೆ ರೀತಿಯ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನಕ್ಕೆ ಶರಣರಾಗಿರುವುದು ಗ್ರಾಮದ ಜನರ ಕಾಡುತ್ತಿದೆ.

ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ ಸಭೆಗಳನ್ನು ನಡೆಸುವ ಮೂಲಕ ಪಿಡಿಓಗಳಿಗೆ ಸೂಚನೆ ನೀಡಲಾಗುತ್ತಿದ್ದರೂ, ಕೂಡಾ ಡಿಸಿ ಅವರ ಆದೇಶಗಳಿಗೆ ಕಿಮ್ಮತ್ತು ಇಲ್ಲದಂತಾಗಿರುವುದಕ್ಕೆ ಯಣ್ಣಿವಡಿಗೇರಿ ಗ್ರಾಮದ ಸದ್ಯದ ಸ್ಥಿತಿ ತಾಜಾ ಉದಾಹರಣೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ