ಕನ್ನಡಪ್ರಭ ವಾರ್ತೆ ಮೈಸೂರುಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ 12 ಹೆಚ್ಚು ಗುಜರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿಯ ವರುಣ ಕಾಲುವೆ ಸಮೀಪದ ಹಳೆ ಕೆಸರೆಯಲ್ಲಿ ತಾಮ್ರ ತಂತಿಗಳನ್ನು ಸಂಗ್ರಹಿಸಿದ್ದ ಗುಜರಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಅಕ್ಕ ಪಕ್ಕದ ಗುಜರಿಗಳಿಗೂ ವ್ಯಾಪಿಸಿದೆ.ಈ ಬೆಂಕಿ ಅವಘಡದಲ್ಲಿ ಹಳೆಯ ಹಾಗೂ ತ್ಯಾಜ್ಯ ವಸ್ತುಗಳು, ಪೀಠೋಪಕರಣಗಳು, ಪ್ಲೈವುಡ್, ಸೋಫಾ ತಯಾರಿಕಾ ಘಟಕಗಳನ್ನು ಒಳಗೊಂಡಂತೆ ಹಲವು ಗೋದಾಮುಗಳು, ಗುಜರಿಗಳು ಬೆಂಕಿಗೆ ಆಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.ಬನ್ನಿಮಂಟಪ ಅಗ್ನಿಶಾಮಕ ಠಾಣೆಯಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ನಿಯಂತ್ರಿಸಿದ್ದಾರೆ.ಇದೇ ಪ್ರದೇಶದಲ್ಲಿ 2 ವರ್ಷಗಳ ಹಿಂದೆಯೇ ಇಂತಹದ್ದೇ ಅಗ್ನಿ ಅವಘಡ ಸಂಭವಿಸಿತ್ತು. ದಹನಕಾರಿ ವಸ್ತುಗಳ ಸಂಗ್ರಹ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಲೀಕರಿಗೆ ಆಗಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಮತ್ತೆ ಅವಘಡ ಸಂಭವಿಸಿದ್ದು, ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಎನ್.ಆರ್. ಠಾಣೆಯ ಪ್ರಭಾರ ಇನ್ಸ್ ಪೆಕ್ಟರ್ ಕುಮಾರ್ ಮತ್ತು ಸಿಬ್ಬಂದಿ, ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ----ಬಾಕ್ಸ್.... ಅಕ್ರಮ ಗುಜರಿಗಳಲ್ಲಿ ವೈರ್ ಸುಟ್ಟರುಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ಹಳೆ ಕೆಸರೆಯಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಗುಜರಿಗಳು ತಲೆ ಎತ್ತಿವೆ. ಕೆಲವರು ಇಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಸಹ ಪಡೆದಿದ್ದಾರೆ. ಗುಜರಿ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ. ಎಲೆಕ್ಟ್ರಿಕಲ್ ವೈರ್ ಗಳನ್ನು ಸುಟ್ಟು ಅವುಗಳಿಂದ ತಾಮ್ರದ ತಂತಿಗಳನ್ನು ಬೇರ್ಪಡಿಸುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಸಹ ಉಂಟಾಗುತ್ತಿದೆ.ಈ ಸಂಬಂಧ ಕ್ರಮ ವಹಿಸುವಂತೆ ಸಂಬಂಧಪಟ್ಟ ಗ್ರಾಪಂ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೊಲೀಸರು ಈಗಾಗಲೇ ಪತ್ರ ಬರೆದಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಹೀಗಿರುವಾಗಿ, ಸೋಮವಾರ ಬೆಳಗಿನ ಗುಜರಿಯಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಇನ್ನಾದರೂ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.