ಕನ್ನಡಪ್ರಭ ವಾರ್ತೆ ಮಾಲೂರು
ಸರ್ಕಾರದಿಂದ ಮಾಸಿಕ ೨೦ ಲಕ್ಷ ರು.ಗಳ ಅನುದಾನ ಬರುತ್ತಿದ್ದರೂ ಅದನ್ನು ಸದುಪಯೋಗ ಮಾಡಿಕೊಳ್ಳಲು ಏಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ, ವಸಂತ್ ಅವರನ್ನು ಶಾಸಕ ನಂಜೇಗೌಡ ಪ್ರಶ್ನಿಸಿದರು.ಉಪಲೋಕಾಯುಕ್ತರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದಾಗ, ಅವಧಿ ಮೀರಿದ ಔಷಧಿ ವಿತರಣೆ, ಆ್ಯಂಬುಲೆನ್ಸ್ ಚಾಲಕನ ಮೊಬೈಲ್ನಲ್ಲಿ ಸಾವಿರಾರು ರು.ಗಳ ವಹಿವಾಟು, ಹಣ ಬದಲಾವಣೆ ವಹಿವಾಟುಗಳು ಹೊರಬಂದ ಕಾರಣ ಲೋಕಾಯುಕ್ತರು ಸುಮೋಟು ಕೇಸ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಶಾಸಕ ನಂಜೇಗೌಡರು ಜಿಲ್ಲಾಆರೋಗ್ಯಾಧಿಕಾರಿಗಳೂಡನೆ ಇಲ್ಲಿನ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಶಾಸಕ ನಂಜೇಗೌಡ ಸಭೆ ನಡೆಸಿದರು.
ಶಾಸಕರ ಅಸಮಾಧಾನಬಳಿಕ ಮಾತನಾಡಿದ ಶಾಸಕರು, ಎಬಿಎಆರ್ಕೆಯಿಂದ ಮಾಸಿಕ ೧೫ ಲಕ್ಷ ರು. ಹಾಗೂ ಎ.ಆರ್.ಎಸ್.ನಿಂದ ಬರುವ ಮಾಸಿಕ ೫ ಲಕ್ಷದ ವೆಚ್ಚ ಹಾಗೂ ಉಳಿತಾಯದ ಬಗ್ಗೆ ಮಾಹಿತಿ ನೀಡಿ ಎಂದರೆ ಸರಿಯಾದ ಮಾಹಿತಿ ನೀಡಲು ವೈದ್ಯಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ರೋಗಿಗಳಿಗೆ ಹೊರಗಡೆ ತೆಗೆದುಕೊಳ್ಳಿ ಎಂದು ಔಷಧಿ ಬರೆಯಬಾರದು ಎಂದು ಆದೇಶ ಇದ್ದರೂ ಇಲ್ಲಿನ ವೈದ್ಯರು ಚೀಟಿ ಬರೆಯುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಆಡಳಿತಾಧಿಕಾರಿಯಾಗಿ ಡಾ.ವಸಂತ್ ವಿಫಲರಾಗಿದ್ದಾರೆ ಎಂದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮಲ್ಲಿ ಇಲ್ಲದ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ರೋಗಿಗಳಿಗೆ ಉಚಿತವಾಗಿ ನೀಡುಬಹುದಾದ ಸೌಲಭ್ಯ ಇದ್ದರೂ ಏಕೆ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಅವರು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು.ಔಷಧಗಳ ಪೂರೈಕೆ ಕೊರತೆ
ಇದಕ್ಕೆ ಉತ್ತರಿಸಿದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಸಂತ್ ಅವರು, ವಾರ್ಷಿಕ ೧.೨೫ ಕೋಟಿ ಮೌಲ್ಯದ ಔಷಧಿಗಳ ಅಗತ್ಯವಿದೆ. ಈ ಬಗ್ಗೆ ರಾಜ್ಯ ಡ್ರಗ್ಸ್ ವಿತರಣಾ ಕೇಂದ್ರಕ್ಕೆ ಪತ್ರ ಬರೆದರೆ ವಾರ್ಷಿಕವಾಗಿ ೪೦ ಲಕ್ಷದ ಔಷಧಿ ಮಾತ್ರ ಬರುತ್ತಿದೆ. ಅದಲ್ಲದೇ ಮಾಸಿಕ ೨೦೦ ರಿಂದ ಮೂನ್ನೂರು ಬಾಟಲ್ ಕೆಮ್ಮು ಔಷಧಿ ಬೇಕಾಗಿದ್ದು, ವಾರ್ಷಿಕವಾಗಿ ೨೦೦ ರಿಂದ ಮುನ್ನೂರು ಸರಬರಾಜು ಆಗುತ್ತಿದೆ. ಆಸ್ಪತ್ರೆಯಲ್ಲಿ ಡಿ.ದರ್ಜೆಯ 33 ನೌಕರರು ಇರಬೇಕಾಗಿದ್ದು, ಒಂದು ಹುದ್ದೆಯನ್ನೂ ತುಂಬಿಲ್ಲ. ಆದರೂ ಹೊರಗುತ್ತಿಗೆ ಮೂಲಕ ಇಲ್ಲಿನ ಸಮಸ್ಯೆಯನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.ವೈದ್ಯಾಧಿಕಾರಿ ಉತ್ತರದಿಂದ ತೃಪ್ತರಾಗದ ಶಾಸಕ ನಂಜೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರೊಂದಿಗೆ ಮಾತನಾಡಿ ಇಲ್ಲಿನ ವೈದ್ಯಾಧಿಕಾರಿಗಳ ಮೇಲೆ ನನಗೆ ನಂಬಿಕೆ ಇಲ್ಲ. ನೀವೆ ಇಲ್ಲಿನ ಅರ್ಥಿಕ ಪರಿಸ್ಥಿತಿ, ಬೇಕಾದ ಸೌಲಭ್ಯಗಳ ಮಾಹಿತಿ, ಹಾಲಿ ನಿರ್ವಹಣೆಯ ರೀತಿಯ ಬಗ್ಗೆ ಹಾಗೂ ಉಳಿಯುವ ಹಣವನ್ನು ಯಾವ ರೀತಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಬಳಸಬಹುದು ಎಂಬುದರ ಬಗ್ಗೆ ವರದಿ ನೀಡಿ ಎಂದರು.
ಜನೌಷಧ ಕೇಂದ್ರದಲ್ಲಿ ಬೇರೆ ಔಷಧ ಮಾರುವಂತಿಲ್ಲಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಜನೌಷಧ ಬಿಟ್ಟು ಬೇರೆ ಔಷಧಿಗಳನ್ನು ಮಾರಾಟ ಮಾಡಬಾರದು ಹಾಗೂ ಹೆಚ್ಚಿನ ಹಣ ವಸೂಲಿ ಮಾಡಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಡಿಎಚ್ಒಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರೂಪ, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ಅಭಿಯಂತರ ರಾಜಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಅಶ್ವಥ ರೆಡ್ಡಿ, ಹೆಡ್ ನರ್ಸ್ ಸರಸ್ವತಮ್ಮ, ಬಿ.ಹೆಚ್.ಇ.ಇನ್ ಚಾರ್ಚ್ ಸರಸ್ವತಮ್ಮ, ನಳಿನಿ, ಡಾ.ರಾಮ್ ರಾಜೇಶ್ ಇನ್ನಿತರರು ಇದ್ದರು,