ಸರ್ಕಾರ, ಸಂಘಸಂಸ್ಥೆಗಳು ರೈತರನ್ನು ಗುರುತಿಸಲಿ: ಕೆ.ವಿ.ನಾಗರಾಜಮೂರ್ತಿ

KannadaprabhaNewsNetwork | Published : Jul 19, 2024 12:48 AM

ಸಾರಾಂಶ

ರೈತರು ದೇಶದ ಬೆನ್ನೆಲುಬಾಗಿದ್ದು, ಸಂಘ-ಸಂಸ್ಥೆಗಳು, ಸರ್ಕಾರ ರೈತರನ್ನು ಗುರುತಿಸಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು. ಮಾಗಡಿಯಲ್ಲಿ ಪ್ರಗತಿಪರ ರೈತರಿಗೆ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಪ್ರತಿಭಾ ಪುರಸ್ಕಾರ, ಸಾಧಕ ಸೇವಾ ರತ್ನ, ನಿವೃತ್ತ ನೌಕರರಿಗೆ, ಪ್ರಗತಿಪರ ರೈತರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಮಾಗಡಿ

ರೈತರು ದೇಶದ ಬೆನ್ನೆಲುಬಾಗಿದ್ದು, ಸಂಘ-ಸಂಸ್ಥೆಗಳು, ಸರ್ಕಾರ ರೈತರನ್ನು ಗುರುತಿಸಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.

ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಸಮುಚ್ಛಯ ಸಭಾಂಗಣದಲ್ಲಿ ತಾಲೂಕಿನ ಬ್ಯಾಲಕೆರೆ ಸಾಂಸ್ಕೃತಿಕ ಪ್ರತಿಷ್ಠಾನದ 9ನೇ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಿಂಚನ ಪ್ರತಿಭಾ ಪುರಸ್ಕಾರ, ಸಾಧಕ ಸೇವಾ ರತ್ನ, ನಿವೃತ್ತ ನೌಕರರಿಗೆ ಸನ್ಮಾನ, ಪ್ರಗತಿಪರ ರೈತರಿಗೆ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ದೇಶದ ಅನ್ನದಾತರು. ಇಂತಹ ರೈತರನ್ನು ಗುರುತಿಸಿ ಸನ್ಮಾನಿಸಿದರೆ ಅವರು ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಕಳೆದ 9 ವರ್ಷಗಳಿಂದಲೂ ಬ್ಯಾಲಕೆರೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸಿದ ಸಾಧಕರನ್ನು ಗುರುತಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಾಹಿತಿ ಎಚ್.ಎಸ್.ಸಿದ್ದಗಂಗಪ್ಪ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಞಾನವೃದ್ಧಿಯತ್ತ ಗಮನಹರಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿರುತ್ತಾರೆ. ಅವರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡಬೇಕು ಎಂದರು.

ಸಾಹಿತಿ ಡಾ. ಶೀಲಾ ಮಳಿಮಠ ಅವರಿಂದ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ತಾಲೂಕಿನ ಮರೂರು ಗ್ರಾಮದ ಅರಸೇಗೌಡರಿಗೆ ಪ್ರಗತಿಪರ ರೈತ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿಯನ್ನು ಡಾ. ಬಿ.ಎಂ.ಶಿವಣ್ಣನವರಿಗೆ ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಇಂಚರ ಸಂಗೀತ ಕಲಾ ತಂಡದಿಂದ ಸುಗಮ ಸಂಗೀತ, ಮೂಡಲಪಾಳ್ಯ ಪಂಚಶೀಲ ನಗರ ನಾಟ್ಯ ಮಯೂರಿ ಸಂಜನ ಮತ್ತು ತಂಡದಿಂದ ನೃತ್ಯ ರೂಪಕ, ಆಕಾಶವಾಣಿ ಮತ್ತು ದೂರದರ್ಶನದ ಪ್ರಭಾ ಇನಾಮದಾರ, ರುದ್ರಮಣಿ ತಂಡ, ಡಾ.ಪಾಲಾಕ್ಷ ಶಾಸ್ತ್ರಿ, ರಾಮಕೃಷ್ಣಯ್ಯ, ರಾಘವೇಂದ್ರ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬ್ಯಾಲಕೆರೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷ ಬಿ.ಜಯಣ್ಣ, ಮುಖಂಡರಾದ ಉಮಾಶಂಕರ್ ಬಿ ಆರ್ ರಾಜಶೇಖರ್ ಗಾಯಕ ನಟರಾಜ್ ಸೇರಿದಂತೆ ಅನೇಕ ಮುಖಂಡರು ಬ್ಯಾಲಕೆರೆ ಗ್ರಾಮಸ್ಥರು ಭಾಗವಹಿಸಿದ್ದರು.

Share this article