ಸರ್ಕಾರಿ ಶಾಲೆಗಳ ಸಬಲೀಕರಣವಾಗಲಿ: ಬುರಡಿ

KannadaprabhaNewsNetwork | Published : Aug 5, 2024 12:37 AM

ಸಾರಾಂಶ

ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು ಕಳವಳಕಾರಿ

ಗದಗ: ಸಂಘ ಸಂಸ್ಥೆಗಳು ಆಗಾಗ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ವಿವಿಧ ಚಟುವಟಿಕೆ ಆಧಾರಿತ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಿಸಬೇಕು, ಅಂದಾಗ ಸರ್ಕಾರಿ ಶಾಲೆಗಳ ಸಬಲೀಕರಣ ಆಗುವುದು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಅವರು ಬೆಟಗೇರಿ ಸರ್ಕಾರಿ ಶಾಲೆ ನಂ. 6ರಲ್ಲಿ ಇನ್ನರ್‌ವೀಲ್ ಕ್ಲಬ್ ದತ್ತು ಶಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಲು ಈಗಾಗಲೇ ಹಲವಾರು ಯೋಜನೆ ಜಾರಿಯಾಗಿದ್ದು, ಮುಖ್ಯವಾಗಿ ಸಮುದಾಯ ಹಾಗೂ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಉತ್ತೇಜನ ನೀಡಬೇಕು ಎಂದರು.

ಇನ್ನರ್‌ವೀಲ್ ಕ್ಲಬ್ ಲೀಟರೇಚರ್ ಕಮೀಟಿ ಚೇರಮನ್ ಸುಮಾ ಪಾಟೀಲ ಮಾತನಾಡಿ, ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು ಕಳವಳಕಾರಿಯಾಗಿದೆ. ಪ್ರತಿಭಾನ್ವಿತ ಶಿಕ್ಷಕರ ಬಳಗ, ಉತ್ತಮ ಬೋಧನೆ, ಸೌಲಭ್ಯಗಳನ್ನು ಸರ್ಕಾರ ಒದಗಿಸಿದ್ದರೂ ಪಾಲಕರು ಆಸಕ್ತಿ ತೋರುತ್ತಿಲ್ಲ, ಅದಕ್ಕಾಗಿ ಇನ್ನರ್‌ವೀಲ್ ಕ್ಲಬ್ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದರು.

ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಗದಗ ಶಹರದ ಸರ್ಕಾರಿ ಶಾಲೆಗಳಾದ ಆಶ್ರಯ ಕಾಲನಿಯ ನಂ.12 ಹಾಗೂ ಬೆಟಗೇರಿ ನಂ.6 ಶಾಲೆಯನ್ನು ಇನ್ನರ್‌ ವೀಲ್ ಕ್ಲಬ್‌ದಿಂದ ದತ್ತು ಪಡೆಯಲಾಗಿದ್ದು, ಶೈಕ್ಷಣಿಕ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದರು.

ಪಿಡಿಸಿ ಪ್ರೇಮಾ ಗುಳಗೌಡ್ರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಅಧ್ಯಯನಗೈದವರು ಪ್ರತಿಭಾನ್ವಿತರಾಗಿದ್ದು, ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕೆಂದರು.

ಈ ವೇಳೆ ಕ್ಲಬ್‌ನ ಮಾಜಿ ಅಧ್ಯಕ್ಷೆ ರಾಜೇಶ್ವರಿ ಬಳ್ಳಾರಿ, ಶ್ರೇಯಾ ಪವಾಡಶೆಟ್ಟರ್‌, ಅನ್ನಪೂರ್ಣ ವರವಿ, ಸದಸ್ಯರಾದ ಜಯಶ್ರೀ ಉಗಲಾಟ, ನಂದಾ ಬಾಳಿಹಳ್ಳಿಮಠ, ಮಂಜುಳಾ ಅಕ್ಕಿ, ಅಶ್ವಿನಿ ಜಗತಾಪ, ಜ್ಯೋತಿ ದಾನಪ್ಪಗೌಡ್ರ, ಸಾಗರಿಕಾ ಅಕ್ಕಿ, ಸುವರ್ಣಾ ಮದರಿಮಠ, ಪ್ರತಿಭಾ ಭದ್ರಶೆಟ್ಟಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಶಾಂತಾ ಮುಂದಿನಮನಿ ಪ್ರಾರ್ಥಿಸಿದರು. ಕ್ಲಬ್‌ನ ಕಾರ್ಯದರ್ಶಿ ವೀಣಾ ತಿರ್ಲಾಪೂರ ಕ್ಲಬ್‌ನ ಕಾರ್ಯಚಟುವಟಿಕೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ವೀಣಾ ಮುತಾಲಿಕ್‌ದೇಸಾಯಿ ಸ್ವಾಗತಿಸಿದರು. ಸುವಣಾ ವಸ್ತ್ರದ ಪರಿಚಯಿಸಿದರು. ಮೀನಾಕ್ಷಿ ಕೊರವನವರ ನಿರೂಪಿಸಿದರು. ಪುಷ್ಪಾ ಭಂಡಾರಿ ವಂದಿಸಿದರು.

Share this article