- ಎಐಡಿಎಸ್ಒ ನೇತೃತ್ವದಲ್ಲಿ ಅರಶಿನಘಟ್ಟ, ಗಾಳಿಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ 16 ಗ್ರಾಮಗಳ ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಶಾಲೆಗೆ ಸೇರಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕಿನ ಅರಶಿನಘಟ್ಟ ಮತ್ತು ಗಾಳಿಹಳ್ಳಿ ಗ್ರಾಮಸ್ಥರು ಎಐಡಿಎಸ್ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಕ್ರಮ ಖಂಡಿಸಿ ಮಾತನಾಡಿದ ಎಐಡಿಎಸ್ಒ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಪ್ರತಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಶಾಲೆ ಅಗತ್ಯವಾಗಿ ಬೇಕಾಗಿದೆ. ಒಂದೇ ಮಗುವಿದ್ದರೂ ಶಾಲೆಯನ್ನು ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. 5 ಕಿ.ಮೀ. ವ್ಯಾಪ್ತಿಯಲ್ಲಿನ ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಿಸಲಾಗುತ್ತಿದೆ. ಕೆ.ಪಿ.ಎಸ್. ಶಾಲೆಗಳನ್ನು ಹೊರಗುತ್ತಿಗೆ ಕೊಡಲಿದೆ. ಪ್ರತಿ ಶಾಲೆಯಿಂದ ಆದಾಯ ಸಂಗ್ರಹಿಸಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಶಾಲೆಗೆ ಬರಲು ಸಾರಿಗೆ ವ್ಯವಸ್ಥೆಯನ್ನು ಎಸ್.ಡಿ.ಎಂ.ಸಿ. ಸದಸ್ಯರೇ ನೋಡಿಕೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಹೀಗೆ ಸರ್ಕಾರ ಹೇಳುವುದೊಂದು, ಮಾಡುವುದೊಂದು ಆಗಿದೆ. ಹಳ್ಳಿಯ ಬಡಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗುವುದು ಎಂಬ ಭರವಸೆ ಸುಳ್ಳಿನಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಆದೇಶದಲ್ಲಿ ತಿಳಿಸಿದಂತೆ ಮ್ಯಾಗ್ನೆಟ್ ಯೋಜನೆ ನಿರ್ಧಾರ ಹಿಂದಕ್ಕೆ ಪಡೆಯುವವರೆಗೂ ಹೋರಾಟವನ್ನು ನಡೆಸಲಾಗುವುದು. ಈ ಬಗ್ಗೆ ಗ್ರಾಮಗಳಲ್ಲಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಿ ಎಂಬ ಸಮಿತಿಯನ್ನು ರಚಿಸಿರುವುದಾಗಿಯೂ ಹೇಳಿದರು.
ಪ್ರತಿಭಟನೆಯಲ್ಲಿ ಅರಶಿನಘಟ್ಟ ಗ್ರಾಮದಲ್ಲಿ ಆಕಾಶ್, ನವೀನ್, ಶಿವರಾಜ್, ಅಣ್ಣಪ್ಪ, ವೆಂಕಟೇಶ್, ಶಿವಮೂರ್ತಿ, ಇಮಾಂ ಸಾಬ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.- - -
(ಬಾಕ್ಸ್) * ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶ ಮಾಡಿದೆ ಎಂದು ಎಐಡಿಎಸ್ಒ ವತಿಯಿಂದ ಗಾಳಿಹಳ್ಳಿ, ಅರಶೀನಘಟ್ಟ ಗ್ರಾಮಗಳಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಪ್ರಸ್ತಾವನೆಗಳಾಗಲಿ, ಆದೇಶಗಳಾಗಲಿ ಬಂದಿಲ್ಲ. ಸರ್ಕಾರದಲ್ಲಿ ಶಾಲೆ ಮುಚ್ಚುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಮಾಹಿತಿ ತಿಳಿಯದೇ ಪ್ರತಿಭಟನೆ ನಡೆಸುವುದು ಸರಿಯಲ್ಲ.-ಎಲ್.ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ ತಾಲೂಕು. - - -
-3ಕೆಸಿಎನ್ಜಿ2: ಸರ್ಕಾರಿ ಶಾಲೆಗಳ ಮುಚ್ಚಬಾರದು ಎಂದು ಒತ್ತಾಯಿಸಿ ಚನ್ನಗಿರಿ ತಾಲೂಕಿನ ಅರಶಿನಘಟ್ಟ ಗ್ರಾಮದಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲಾಯಿತು.