ಗದಗ: ರಾಜ್ಯದಲ್ಲಿರುವ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವುದೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ನಗರದ ಕೆ.ಎಚ್. ಪಾಟೀಲ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 120 ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಉಪಕರಣಗಳು ಸೇರಿದಂತೆ ಕಟ್ಟಡಗಳನ್ನು ನಿರ್ಮಿಸಿ, ಮೇಲ್ದರ್ಜೆಗೆ ಏರಿಸಲಾಗುವುದು. 1400 ಕೋಟಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಕೆಜಿಡಿಟಿಐ ಅಭಿವೃದ್ಧಿ, 1500 ಕೋಟಿ ಪ್ರಸ್ತಾವನೆಗೆ ಕಳುಹಿಸಲಾಗಿದೆ. ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನೀಡುವ ಯುವನಿಧಿ ಗ್ಯಾರಂಟಿಯಲ್ಲಿ 287000 ಪದವಿ ಡಿಪ್ಲೊಮಾ ಮಾಡಿದವರು ನೋಂದಣಿಯಾಗಿದ್ದಾರೆ. 190000 ಜನರಿಗೆ ಯುವನಿಧಿ ಯೋಜನೆಯಡಿ ತಿಂಗಳಿಗೆ 3 ಸಾವಿರಗಳಂತೆ ನೀಡಲಾಗುತ್ತಿದೆ ಹಾಗೂ ನೋಂದಣಿಯಾದವರಿಗೆ ಹೆಚ್ಚುವರಿ ಉದ್ಯೋಗ ಕೌಶಲ್ಯವನ್ನು ನೀಡಲಾಗುತ್ತಿದೆ ಎಂದರು. ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ಬರುವ ಐಟಿಐ ಕಾಲೇಜುಗಳು ಕೆಜಿಡಿಟಿಐ, ಸರ್ಕಾರಿ ಟೂರ್ ಆ್ಯಂಡ್ ಟ್ರೇಡಿಂಗ್ ಸೇಂಟರ್ 33 ಇವೆ. ಈ ವರ್ಷ ಇನ್ನೂ 8 ಸೇರಿಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅದರ ಜೊತೆಗೆ ಹೆಚ್ಚುವರಿ ಕೋರ್ಸ್ ನೀಡಲಾಗುತ್ತದೆ. ಯುವಕರಿಗೆ ಯಾವ ರೀತಿ ಉದ್ಯೋಗ ಕೊಡಿಸಬಹುದು ಎನ್ನುವುದರ ಕಡೆಗೆ ಸರ್ಕಾರ ಗಮನ ಹರಿಸಿದೆ. ಹಾಗಾಗಿ ಬೆಳಗಾವಿ, ಕಲಬುರಗಿ, ಗದಗ, ಸೇಡಂ, ಬೆಂಗಳೂರ ಸೇರಿದಂತೆ ರಾಜ್ಯದಲ್ಲಿ ಅನೇಕ ಉದ್ಯೋಗ ಮೇಳಗಳನ್ನು ಮಾಡಲಾಗಿದೆ ಎಂದರು.
ಕಲಬುರಗಿ, ಕೊಪ್ಪಳ, ಮೈಸೂರಿನಲ್ಲಿ ಮಲ್ಟಿ ಸ್ಕಿಲ್ ತರಬೇತಿ ಆರಂಭಿಸಲಾಗುತ್ತದೆ. ಅದಕ್ಕೆ ₹120 ಕೋಟಿ ಅಂದಾಜು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸದಸ್ಯ ಕೃಷ್ಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.