ಹುಬ್ಬಳ್ಳಿ:
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದು, ಪದವೀಧರರು ಕಡ್ಡಾಯವಾಗಿ ಹೆಸರು ನೋಂದಾಯಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಮತ್ತು ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ, ಆತ್ಮನಿರ್ಭರ ಭಾರತ ಸಂಕಲ್ಪ, ಹರ್ ಘರ್ ಸ್ವದೇಶಿ ಅಭಿಯಾನ ಅಂಗವಾಗಿ ನಡೆದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೊದಲಿನ ವೋಟರ್ ಎನ್ರೋಲ್ಮೆಂಟ್ ಈಗ ಬದಲಾಗಿದೆ. ಮೊದಲು ಪ್ರತಿ ಚುನಾವಣೆಯಲ್ಲಿ ಮತದಾರರ ಹೆಸರು ನೋಂದಾಯಿಸುವುದಿರಲಿಲ್ಲ, ಈಗ ಪದವೀಧರರು ಮತ ಚಲಾಯಿಸಬೇಕೆಂದರೆ ಕಡ್ಡಾಯವಾಗಿ ಹೊಸದಾಗಿ ಹೆಸರನ್ನು ನೋಂದಾಯಿಸಲೇಬೇಕು ಎಂದರು.ಆತ್ಮನಿರ್ಭರ ಭಾರತ ಸಾಕಾರವಾಗಬೇಕಾದರೆ ನಾವೆಲ್ಲರೂ ಭಾರತದಲ್ಲಿ ತಯಾರಿಸಿದ ವಸ್ತುಗಳನ್ನೆ ಉಪಯೋಗಿಸಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವದೇಶಿ ಮೇಳ ಆಯೋಜಿಸಬೇಕು, ಜಿಎಸ್ಟಿ ಪರಿಷ್ಕರಣೆಯಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ನಿತ್ಯ ಬಳಸುವ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ದವಸ-ಧಾನ್ಯಗಳು ಝೀರೋ ತೆರಿಗೆ ವ್ಯಾಪ್ತಿಗೆ ಬಂದಿವೆ. ಜಿಎಸ್ಟಿ ಪರಿಷ್ಕರಣೆಯ ಲಾಭಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.
ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ಬಸವರಾಜ ಗರಗ, ಸತೀಶ ಶೇಜವಾಡಕರ, ಮಹೇಂದ್ರ ಕೌತಾಳ, ರಾಮಣ್ಣ ಬಡಿಗೇರ, ವೀರೇಶ ಅಂಚಟಗೇರಿ, ಸಂಜಯ ಕಪಟಕರ, ಶಿವು ಹಿರೇಮಠ, ಕೃಷ್ಣಾ ಗಂಡಗಾಳೇಕರ, ಮಂಜುನಾಥ ಕಾಟಕರ, ಈಶ್ವರಗೌಡ ಪಾಟೀಲ್, ಮಂಜುನಾಥ ನೀರಲಕಟ್ಟಿ, ರಾಜು ಕೋರ್ಯಾಣಮಠ, ಅನುಪ ಬಿಜವಾಡ, ಪ್ರಿತಮ್ ಅರಕೇರಿ, ಸುಮಿತ್ರಾ ಗುಂಜಾಳ ಸೇರಿದಂತೆ ಹಲವರಿದ್ದರು.