ಹುಬ್ಬಳ್ಳಿ:
ಬೆಳಗ್ಗೆ 4.30ಕ್ಕೆ ಮಂಗಳಾರತಿ ಹಾಗೂ ಶ್ರೀ ಗುರುಷ್ಟಕಂ ಪಠಣದೊಂದಿಗೆ ದಿನದ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ರಾಧಾ ಗೋವಿಂದ ದೇವಜಿ ಹಾಗೂ ಶ್ರೀ ಕೃಷ್ಣ ಬಲರಾಮರು ವೃಂದಾವನದಲ್ಲಿ ಕೈಯಿಂದ ತಯಾರಿಸಲಾದ ನೀಲಿ ಮತ್ತು ಚಿನ್ನದ ಬಣ್ಣದ ‘ವೃಂದಾವನ ಚಂದ್ರ ಅಲಂಕಾರ’ದಲ್ಲಿ ಭಕ್ತರ ಗಮನ ಸೆಳೆದರು. ದಿನವಿಡೀ ಭಕ್ತರು ದರ್ಶನ, ಅರ್ಚನೆ ಹಾಗೂ ವಿವಿಧ ಸೇವೆಗಳಲ್ಲಿ ಪಾಲ್ಗೊಂಡರು.
ಭಕ್ತರು ತಯಾರಿಸಿದ 108 ಬಗೆಯ ಭಕ್ಷ್ಯಗಳ ವಿಶೇಷ ಮಹಾನೈವೇದ್ಯವನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ತುಪ್ಪದಿಂದ ತಯಾರಿಸಿದ 160 ಕೆಜಿ ತೂಕದ ಬೃಹತ್ ಲಡ್ಡು ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಸಂಜೆ ಹುಬ್ಬಳ್ಳಿ-ಧಾರವಾಡದ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ಮಯೂರ ನಾಟ್ಯ ಕೇಂದ್ರದ ವತಿಯಿಂದ ನೃತ್ಯ ರೂಪಕ ಪ್ರದರ್ಶನಗೊಂಡರೆ, ಬಳಿಕ ಮನು ಕುಮಾರ್ ಹಾಗೂ ತಂಡದಿಂದ ತಬಲಾ ಜುಗಲ್ಬಂದಿ ನಡೆಯಿತು.ಬಳಿಕ ಶ್ರೀರಾಧಾ ಗೋವಿಂದ ದೇವಜಿಗೆ ಸಂಕ್ಷಿಪ್ತ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 9.30ಕ್ಕೆ ಶಂಖನಾದದೊಂದಿಗೆ ಮಹಾಭಿಷೇಕ ಆರಂಭಗೊಂಡಿತು. ಚಂದನದ ಎಣ್ಣೆ, ಪಂಚಗವ್ಯ, ಪಂಚಾಮೃತ, ವಿವಿಧ ಹಣ್ಣಿನ ರಸ ಹಾಗೂ ರತ್ನಜಲದಿಂದ ಶ್ರೀಮೂರ್ತಿಗಳಿಗೆ ವಿಧಿವತ್ತಾಗಿ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 11.30ಕ್ಕೆ ಅಭಿಷೇಕ ಪೂರ್ಣಗೊಂಡಿತು.
ಧಾರ್ಮಿಕ ವಿಧಿ-ವಿಧಾನಗಳು, ಸಂಗೀತ-ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾವಿರಾರು ಭಕ್ತರ ಭಾಗವಹಿಸುವಿಕೆಯೊಂದಿಗೆ ಇಸ್ಕಾನ್ನ ಎರಡು ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಭಕ್ತಿ ಹಾಗೂ ವೈಭವದಿಂದ ಸಂಪನ್ನಗೊಂಡಿತು.