ಕನ್ನಡಪ್ರಭ ವಾರ್ತೆ ಕುಶಾಲನಗರ ಹನುಮ ಜಯಂತಿ ಅಂಗವಾಗಿ ಶುಕ್ರವಾರ ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ, ನಂತರ ಮಹಾಮಂಗಳಾರತಿ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು.
ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ಡಿ. ಪುಂಡರಿಕಾಕ್ಷ, ಕಾರ್ಯದರ್ಶಿ ರಾಜೀವ್, ಖಜಾಂಚಿ ಜಗದೀಶ್ ಮತ್ತಿತರರು ಇದ್ದರು. ಇದೆ ವೇಳೆ ಹನುಮ ಜಯಂತಿ ಅಂಗವಾಗಿ ಕುಶಾಲನಗರ ಹನುಮಂತೋತ್ಸವ ಆಚರಣೆ ಸಮಿತಿ ಆಶ್ರಯದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲ ಗ್ರಾಮಗಳ 9 ಮಂಟಪಗಳ ಶೋಭಾಯಾತ್ರೆ ನಡೆಯಿತು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ಕುಶಾಲನಗರ ಎಚ್ಆರ್ಪಿ ಕಾಲೋನಿ, ಗುಡ್ಡೆಹೊಸೂರು, ಮಾದಾಪಟ್ಟಣ ಬೈಚನಹಳ್ಳಿ ಮುಳ್ಳುಸೋಗೆ ಕೂಡಿಗೆ ಮತ್ತು ಹಾರಂಗಿ ಗ್ರಾಮಗಳ ವಿವಿಧ ಸಮಿತಿಗಳ ಮೂಲಕ ಅಲಂಕೃತ ಮಂಟಪಗಳು ಸಂಜೆ ವೇಳೆ ಕುಶಾಲನಗರ ಪಟ್ಟಣಕ್ಕೆ ಸಾಗಿ ಬಂದವು.ಕುಶಾಲನಗರ ಗಣಪತಿ ದೇವಾಲಯ ಬಳಿ ಬಂದು ಸೇರಿದ ಮಂಟಪಗಳು ಪ್ರದರ್ಶನಗಳನ್ನು ನೀಡಿದರು. ಅದ್ಧೂರಿ ಡಿ.ಜೆ.ಯೊಂದಿಗೆ ಹನುಮ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಸಾವಿರಾರು ಹನುಮ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಕಲ್ಪಿಸಲಾಗಿತ್ತು.