ಔರಾದ್‌: ಕನ್ನಡ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jan 21, 2024 1:33 AM

ಸಾರಾಂಶ

ಪಟ್ಟಣದಲ್ಲಿ ಡೊಳ್ಳು ಬಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದ ಶಾಸಕ ಪ್ರಭು ಚವ್ಹಾಣ್‌. ಮೆರವಣಿಗೆಯಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಶಾಲಾ ಮಕ್ಕಳು.

ಕನ್ನಡಪ್ರಭ ವಾರ್ತೆ ಔರಾದ್

ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನಲೆ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಶನಿವಾರ ಔರಾದ್ ಪಟ್ಟಣದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ್‌ ಭವ್ಯ ಸ್ವಾಗತ ಕೋರಿದರು.

ರಥಯಾತ್ರೆ ಪಟ್ಟಣಕ್ಕೆ ಪ್ರವೇಶಿಸುತ್ತಿದ್ದಂತೆ ಕನ್ನಡಾಂಬೆ ವೃತ್ತದ ಬಳಿ ಶಾಸಕರು ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ, ಪುಷ್ಪಮನ ನಮನ ಸಲ್ಲಿಸಿದರು.

ರಾಜ್ಯಾದ್ಯಂತ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಅರಿವು ಮೂಡಿಸುವ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೆರವಣಿಗೆಯಲ್ಲಿ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ, ಕಸಾಪ ಅಧ್ಯಕ್ಷ ಶಾಲಿವಾನ ಉದಗಿರೆ, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಂ.ಅಮರವಾಡಿ, ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ ಸೇರಿದಂತೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆ ಪ್ರತಿನಿಧಿಗಳು, ಸಾಹಿತಿಗಳು, ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

1000 ಮೀಟರ್ ಧ್ವಜ ಮೆರವಣಿಗೆ

ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಹಿನ್ನೆಲೆ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಾವಿರ ಮೀಟರ್ ಕನ್ನಡ ಬಾವುಟದ ಮೆರವಣಿಗೆ ಆಕರ್ಷಕವಾಗಿತ್ತು. ವಿವಿಧ ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ಬಾವುಟ ಹಿಡಿದು ಕನ್ನಡದ ಜಯಘೋಷಗಳನ್ನು ಹಾಕುತ್ತಾ ಸಾಗುತ್ತಿರುವಾಗ ಶಾಸಕ ಪ್ರಭು ಚವ್ಹಾಣ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ತಾಲೂಕಿನ ಕೌಠಾ ಗ್ರಾಮದಿಂದ ಆರಂಭವಾದ ರಥಯಾತ್ರೆ ಕೌಡಗಾಂವ, ಮುಸ್ತಾಪೂರ್, ಸಂತಪೂರ್, ಬೋರಾಳ ಮಾರ್ಗವಾಗಿ ಔರಾದ್‌ಗೆ ತಲುಪಿತು.

ಮೆರವಣಿಗೆಯುದ್ದಕ್ಕೂ ಕನ್ನಡ ಹಾಡುಗಳಿಗೆ ಕೆಂಪು-ಹಳದಿ ಶಾಲು ಧರಿಸಿದ್ದ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು, ಸಾಹಿತಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಕನ್ನಡದ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು. ಶಾಸಕರು ಡೊಳ್ಳು ಹೊಡೆಯುತ್ತ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ಮೆರವಣಿಗೆಯು ಕನ್ನಡಾಂಬೆ ವೃತ್ತದಿಂದ ಆರಂಭಗೊಂಡು ತಾ.ಪಂ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳ ಮುಖಾಂತರ ಅಮರೇಶ್ವರ ಕಲ್ಯಾಣ ಮಂಟಪದ ಬಳಿ ಕೊನೆಗೊಂಡಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ ಶಿವಲಿಂಗ ಹೇಡೆ ಕನ್ನಡ ನಾಡುನುಡಿ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ಬಸವರಾಜ ಶಟಕಾರ್, ಸಂಜೀವಕುಮಾರ್ ಜುಮ್ಮಾ, ಶಾಲಿವಾನ ಉದಗಿರೆ, ಬಿಎಂ ಅಮರವಾಡಿ, ಸಂಗಮೇಶ ಬೆಲ್ದಾಳ, ಅನೀಲ ದೇವಕತೆ, ಅಶೋಕ ಶೆಂಬೆಳ್ಳೆ, ರಮೇಶ ವಾಘಮಾರೆ, ಅಂಬಾದಾಸ ನಳಗೆ, ರತ್ನದೀಪ ಕಸ್ತೂರೆ, ಶಿವು ಮುಕ್ತೆದಾರ್, ಶರಣು ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.

Share this article