ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ

KannadaprabhaNewsNetwork |  
Published : Sep 28, 2025, 02:00 AM IST
೨೭ ವೈಎಲ್‌ಬಿ ೦೧ಯಲಬರ‍್ಗಾದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು

ಯಲಬುರ್ಗಾ: ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸಮಿತಿಯು ಕೆಲಸ ಮಾಡುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

೨೦೨೩-೨೫ ರವರೆಗೆ ೬೦೭೮೩ ಜನ ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿದ್ದಾರೆ. ಎನ್‌ಪಿಸಿಎಲ್‌ನಿಂದ ೩೬೦ ಅರ್ಹ ಫಲಾನುಭವಿಗಳಿದ್ದಾರೆ ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಸಭೆಯಲ್ಲಿ ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಯಲಬುರ್ಗಾ-ಕುಕನೂರು ತಾಲೂಕಿನ ೫೮೫೪೨ ಜನ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಆಹಾರ ಇಲಾಖೆ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠ ತಿಳಿಸಿದರು. ಫಲಾನುಭವಿಗಳಿಗೆ ತಿಂಗಳಲ್ಲಿ ಮೂರು ದಿನ ಮಾತ್ರ ಪಡಿತರ ವಿತರಿಸಲಾಗುತ್ತಿದೆ. ಇದರಿಂದ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ತಿಂಗಳಲ್ಲಿ ೨೫ ದಿನಗಳವರೆಗೆ ಪಡಿತರ ಹಂಚಿಕೆ ಮಾಡಬೇಕು. ಈ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಡ್ಡಾಯ ಸೂಚನೆ ನೀಡಬೇಕು ಎಂದು ಗ್ಯಾರಂಟಿ ಸಮಿತಿಯ ಸದಸ್ಯರು ಸಭೆಯಲ್ಲಿ ತಾಕೀತು ಮಾಡಿದರು.

ಜಿಲ್ಲಾಧ್ಯಕ್ಷ ಮಾತನಾಡಿ, ಎಲ್ಲ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ನೋಟಿಸ್ ಜಾರಿ ಮಾಡುವ ಮೂಲಕ ತಿಂಗಳಲ್ಲಿ ೨೫ದಿನಗಳ ವರೆಗೆ ಪಡಿತರ ವಿತರಣೆಗೆ ಸೂಚಿಸಬೇಕು. ಅಕ್ಕಿ ಮತ್ತು ಜೋಳ ವಿತರಿಸುವಾಗ ತೂಕದಲ್ಲಿ ಕಡಿಮೆ ಮಾಡಬಾರದೆಂದು ಅಂಗಡಿ ಮಾಲೀಕರಿಗೆ ನಿರ್ದೇಶನ ನೀಡಬೇಕು ಎಂದು ಶಿರಸ್ತೇದಾರ್‌ಗೆ ತಿಳಿಸಿದರು.

ತಾಲೂಕಿನಲ್ಲಿ ಕೆಕೆಆರ್‌ಟಿಸಿ ನಿಗಮದಿಂದ ಶಕ್ತಿ ಯೋಜನೆಯಡಿ ೨೦೨೩-೨೫ರವರೆಗೆ ೧.೪೨ ಕೋಟಿ ಫಲಾನುಭವಿಗಳು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕರ‍್ಲಹಳ್ಳಿ ಮಾತನಾಡಿ, ಬಸ್‌ನಲ್ಲಿ ನಿರ್ವಾಹಕರು ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ‌ ಈ ಬಗ್ಗೆ ನಿರ್ವಾಹಕರು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಬೇಕೆಂದು ವ್ಯವಸ್ಥಾಪಕರಿಗೆ ಸೂಚಿಸಿದರು.

ಜೆಸ್ಕಾಂ ಎಇಇ ಮಹ್ಮದ್ ಖಲೀಮುದ್ದೀನ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ೨೮೨೩೦ ಗ್ರಾಹಕರಲ್ಲಿ ೨೭೩೮೨ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.

ತಾಲೂಕಿನಲ್ಲಿ ೧೦೧೮೪ ನಿರುದ್ಯೋಗ ಯುವಕ ಯುವತಿಯರು ಯುವನಿಧಿ ಲಾಭ ಪಡೆಯುತ್ತಿದ್ದಾರೆ ಎಂದು ಇಲಾಖೆ ಅಧಿಕಾರಿ ಶಿವಯೋಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕುಕನೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒಗಳಾದ ನೀಲಗಂಗಾ, ಸಂತೋಷ ಪಾಟೀಲ್, ಸಮಿತಿ ಸದಸ್ಯರು ಇತರರು ಇದ್ದರು.

ಅ. ೬ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು,ತಾಲೂಕಿನ ೨೫೬ ಮತಗಟ್ಟೆಗಳಿಗೆ ಬಸ್‌ನ ವ್ಯವಸ್ಥೆ ಮಾಡಲಾಗಿದೆ.ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಸಂಬಂಧಿಸಿದ ಅಧಿಕಾರಿಗಳು ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡು ಫಲಾನುಭವಿಗಳನ್ನು ಕರೆ ತರಬೇಕು. ಇದು ಯಾವುದೇ ರಾಜಕೀಯ ಸಭೆಯಲ್ಲ. ಇದು ಫಲಾನುಭವಿಗಳ ಸಮಾವೇಶವಾಗಿದೆ ಎಂದು ಶ್ರೀನಿವಾಸ ರಡ್ಡಿ ಹೇಳಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ