ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ನಟರಾಜನಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ನೃತ್ಯ ಸಂಸ್ಥೆಯ ಸಂಸ್ಥಾಪಕರು ಹಾಗೂ ತಮ್ಮ ನೆಚ್ಚಿನ ಗುರುಗಳಾದ ಹೇಮಾವತಿ ಹಾಗೂ ಪತಿ ಕಾಂತರಾಜ್ ಅವರಿಗೆ ಗುರು ಪೂಜೆ ಸಲ್ಲಿಸಿ ಸನ್ಮಾನಿಸಿದರು.
ಪೂಜೆಯ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಹೇಮಾವತಿ ಅವರು ಬದುಕಿನ ಮೌಲ್ಯಗಳನ್ನು ತಿಳಿಸುವ ಗುರುವಿಗೆ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಉನ್ನತ ಮತ್ತು ಗೌರವದ ಸ್ಥಾನಮಾನವಿದೆ. ಜೀವನ ಮತ್ತು ಆಧ್ಯಾತ್ಮಿಕ ಶಕ್ತಿಯ ಮೌಲ್ಯವನ್ನು ತಿಳಿಸುವ ಗುರುವಿಗೆ ಗೌರವ ಸಲ್ಲಿಸಲು ಗುರುಪೂರ್ಣಿಮೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ ಎಂದರು.ನೃತ್ಯ ಗುರುಗಳಾದ ಕಾವ್ಯಶ್ರೀ, ಕಾಂತರಾಜ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ನೃತ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.