ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕಿಕ್ಕೇರಿ ಮತ್ತು ಕಸಬಾ ಹೋಬಳಿಯ ಅಚ್ಕುಕಟ್ಟು ಪ್ರದೇಶಕ್ಕೆ ಹೇಮಾವತಿ ನದಿ ನೀರು ಪೂರೈಕೆ ಮಾಡುವ ಎಡದಂಡೆ ನಾಲೆಯ 54 ನೇ ವಿತರಣಾ ನಾಲೆ ಆಧುನೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಕಳಪೆ ಕಾಮಗಾರಿ ಸರಿಪಡಿಸದಿದ್ದರೆ ಪಟ್ಟಣದ ಹೇಮಾವತಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಎಚ್ಚರಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, 54ನೇ ವಿತರಣಾ ನಾಲೆ ಕಳಪೆ ಕಾಮಗಾರಿ ವಿರುದ್ದ ಈಗಾಗಲೇ ಸ್ಥಳೀಯ ರೈತರು ಪ್ರತಿಭಟನೆ ಮಾಡಿ ನೀರಾವರಿ ಇಲಾಖೆ ಇಂಜಿನಿಯರುಗಳ ಗಮನ ಸೆಳೆದಿದ್ದಾರೆ. ಆದರೆ, ರೈತರ ಪ್ರತಿಭಟನೆಗೆ ಎಂಜಿನಿಯರುಗಳು ಪೂರಕವಾಗಿ ಸ್ಪಂಧಿಸಿ ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲಾ ಆಧುನೀಕರಣದ ಕಳಪೆ ಕಾಮಗಾರಿಯ ಬಗ್ಗೆ ನಾನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಮ್ಮ ಮನವಿಗೆ ಸ್ಪಂಧಿಸಿರುವ ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಆಡಳಿತ ವ್ಯವಸ್ಥಾಪಕರು ಮತ್ತು ಕಾರ್ಯದರ್ಶಿಗಳ ಮೂಲಕ ಸ್ಥಳ ಪರಿಶೀಲನೆ ಮಾಡಿಸುವ ಭರವಸೆ ನೀಡಿದ್ದಾರೆ ಎಂದರು.ತಕ್ಷಣವೇ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಕಾಮಗಾರಿ ಸ್ಥಳ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆಯ ವೇಳೆ ಸ್ಥಳೀಯ ರೈತರಿಗೂ ಮಾಹಿ ನೀಡಬೇಕು. ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ತಪ್ಪಿತಸ್ಥ ಎಂಜಿನಿಯರುಗಳ ವಿರುದ್ದವೂ ಕ್ರಮ ಜರುಗಿಸಬೇಕೆಂದು ರಾಜೇಗೌಡ ಒತ್ತಾಯಿಸಿದ್ದಾರೆ.
ಗುತ್ತಿಗೆದಾರ ತನಗಿಷ್ಟ ಬಂದಂತೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ನೋಡಿದರೆ ಗುತ್ತಿಗೆದಾರನ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ ಎಂದು ಆರೋಪಿಸಿದರು.ರೈತರು ನೀರಾವರಿ ಇಲಾಖೆ ಎಂಜಿನಿಯರುಗಳ ಮೇಲೆ ನಂಬಿಕೆ ಕಳೆದು ಕೊಂಡಿದ್ದಾರೆ. ಕಾಮಗಾರಿಯ ಗುಣಮಟ್ಟದಲ್ಲಿ ನಿರ್ವಹಿಸಿ ರೈತರಿಗೆ ಶಾಶ್ವತ ಅನುಕೂಲ ಕಲ್ಪಿಸುವತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ರೈತ ಸಮುದಾಯದ ಸಾಶ್ವತ ಬದುಕಿಗಾಗಿ ರಾಜ್ಯ ರೈತಸಂಘ ದೊಡ್ಡಮಟ್ಟದ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.