ಕನ್ನಡಪ್ರಭ ವಾರ್ತೆ ತುಮಕೂರು
40 ವರ್ಷಗಳ ದೀರ್ಘ ಕಾಲದ ನಂತರ ಗುರು-ಶಿಷ್ಯರು ಮುಖಾಮುಖಿಯಾಗಿ ಸಂಭ್ರಮಿಸಿದರು.
1985 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಓದಿದ ವಿದ್ಯಾರ್ಥಿಗಳು, ಆಗ ತಮಗೆ ಪಾಠ ಹೇಳಿದ ಗುರುಗಳನ್ನು ಕರೆತಂದು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಂದನೆ ಸಲ್ಲಿಸಿ ಗೌರವಿಸಿದರು.ಪ್ರೌಢಶಾಲೆಯಲ್ಲಿ ಜೊತೆಯಾಗಿ ಓದಿದ್ದ ಗೆಳೆಯ, ಗೆಳತಿಯರು ನಂತರ ಕಾಲೇಜು, ಉದ್ಯೋಗ, ವ್ಯವಹಾರ ನಿಮಿತ್ತ ಒಂದೊಂದು ಊರಿನಲ್ಲಿ ನೆಲೆಸಿದ್ದರು. ಬಹುತೇಕರಿಗೆ ಒಬ್ಬರಿಗೊಬ್ಬರು ಸಂಪರ್ಕವಿಲ್ಲದಂತಾಗಿತ್ತು. ಆಗಿನ ಎಲ್ಲಾ ಹಳೆ ಗೆಳೆಯರನ್ನು ಒಟ್ಟಾಗಿ ಸೇರಿಸಬೇಕು. ಶಾಲೆಯಲ್ಲಿ ಬೋಧಿಸಿದ ಶಿಕ್ಷಕರನ್ನು ಕರೆತಂದು ಗೌರವಿಸಬೇಕು, ಶಾಲಾ ದಿನಗಳ ನೆನಪನ್ನು ಪರಸ್ಪರ ಮೆಲುಕು ಹಾಕಬೇಕು ಎಂದು 85ರ ಸಾಲಿನ ವಿದ್ಯಾರ್ಥಿಗಳಾದ ಶ್ರೀನಾಥ್, ರಾಮೇಶ್ವರ, ಲಕ್ಷ್ಮಿಕಾಂತ್, ಟಿ.ಆರ್.ನಾಗರತ್ನ, ಎಂ.ಆಶಾಲತಾ, ಇಂದ್ರಜಾ, ಶ್ರೀರಂಗಯ್ಯ ಮೊದಲಾದವರು ಆಸಕ್ತಿವಹಿಸಿದರು. ಅದರ ಫಲವಾಗಿ 40 ವರ್ಷಗಳ ನಂತರ ತಮ್ಮ ಹೈಸ್ಕೂಲ್ ದಿನಗಳ ಗುರು-ಶಿಷ್ಯರ ಸಮಾಗಮ ಸಾಧ್ಯವಾಯಿತು.
ನಗರದ ಹೋಟೆಲ್ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಗಿನ ಶಿಕ್ಷಕರಾದ ಕೆ.ಪಿ.ರಾಜಣ್ಣ, ಆರ್.ತಿಮ್ಮಯ್ಯ, ಪಿ.ದೊಡ್ಡಸಿದ್ಧಯ್ಯ, ಡಿ.ಆರ್.ಈರಯ್ಯ, ಡಿ.ಆರ್.ಪ್ರೇಮಕುಮಾರಿ, ಎಂ.ವಿ.ತಿಮ್ಮಯ್ಯ, ವಿ.ಜಿ.ವೇಣುಗೋಪಾಲ್, ಪಿ.ರಾಮಕೃಷ್ಣಯ್ಯ ಅವರನ್ನು ಶಿಷ್ಯರು ಸನ್ಮಾನಿಸಿ ಗೌರವಿಸಿ ಗುರುವಂದನೆ ಸಲ್ಲಿಸಿದರು. ಶಿಷ್ಯರಲ್ಲಿ ಹಲವರು ಮದುವೆಯಾಗಿ ಮಕ್ಕಳು, ಮೊಮ್ಮಕ್ಕಳನ್ನು ಕಂಡಿದ್ದಾರೆ. ಅವರಲ್ಲಿ ಕೆಲವರು ಕುಟುಂಬದ ಸದಸ್ಯರೊಂದಿಗೆ ಬಂದು ಗುರುವಂದನೆ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದರು.