ಸಾಗರ: ನಾಡಿನ ಯತಿಶ್ರೇಷ್ಠರಲ್ಲಿ ಒಬ್ಬರಾದ ಎಡತೊರೆ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ಫೆ.3ರಂದು ತಮ್ಮ ವಿಜಯಯಾತ್ರೆಯನ್ನು ಸಾಗರದಲ್ಲಿ ಸಮಾಪ್ತಿಗೊಳಿಸಲಿದ್ದಾರೆ. ಅಂದು ಸಂಜೆ 5.30ಕ್ಕೆ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಮೈಸೂರಿನ ಯೋಗಿರಾಜ್ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ನಿರ್ಮಿಸಿ ಕೊಟ್ಟಿದ್ದರೆ, ಎಡತೊರೆ ಶ್ರೀಗಳು ಅಯೋಧ್ಯೆ ರಾಮಮಂದಿರಕ್ಕೆ ಉತ್ಸವಮೂರ್ತಿ ನೀಡಿದ್ದಾರೆ. ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ 15 ದಿನ ಅಯೋಧ್ಯೆಯಲ್ಲಿ ಶ್ರೀಗಳು ವಾಸ್ತವ್ಯ ಹೂಡಿದ್ದರು. ಅನೇಕ ಕ್ಷೇತ್ರಗಳಿಗೆ ಭೇಟಿ ನೀಡಿ, ಧಾರ್ಮಿಕ ಪ್ರವಚನ ನೀಡುತ್ತ, ಶಾಂಕರ ತತ್ವವನ್ನು ಎಲ್ಲೆಡೆ ಪ್ರಸಾರ ಮಾಡುತ್ತಿದ್ದಾರೆ ಎಂದರು.
ಶ್ರೀಗಳು ಸಾಗರದಲ್ಲಿ ತಮ್ಮ ವಿಜಯಯಾತ್ರೆ ಸಮಾಪ್ತಿಗೊಳಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಹಿನ್ನೆಲೆ ಮಠದ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಮ.ಸ. ನಂಜುಂಡಸ್ವಾಮಿ ಮಾತನಾಡಿ, ಎಡತೊರೆ ಶ್ರೀಗಳು ಸೌಂದರ್ಯ ಲಹರಿಯನ್ನು ಜಾತಿಮತ ಬೇಧಭಾವ ನೋಡದೇ, ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸಿದವರು. ದೇಶಾದ್ಯಂತ ಸೌಂದರ್ಯ ಲಹರಿಯನ್ನು ಪ್ರಸರಿಸಿದ್ದಾರೆ ಎಂದು ಹೇಳಿದರು.