ರೋಣ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮನಸ್ಸು ಮಾಡಬೇಕು. ಅಗತ್ಯಬಿದ್ದರೆ ತಾವು ತ್ಯಾಗಿಗಳಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿ ಪಕ್ಷಕ್ಕಾಗಿ ಅವಿರತ ದುಡಿಯುತ್ತಿದ್ದಾರೆ. ಹಿರಿಯರಾದ ಜಿ.ಎಸ್. ಪಾಟೀಲ ಅವರು ಈ ಬಾರಿ ಸಚಿವರಾಗಲು ಹೈಕಮಾಂಡ್ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕು. ಜಿಲ್ಲೆಗೆ ಒಂದೇ ಸಚಿವ ಸ್ಥಾನ ಎಂದು ಹೈಕಮಾಂಡ್ ನಿರ್ಧರಿಸಿದ್ದೇ ಆದಲ್ಲಿ ಈ ಬಾರಿ ಸಚಿವ ಎಚ್.ಕೆ. ಪಾಟೀಲ ಅವರು ಪೈಪೋಟಿ ಮಾಡದೇ ಜಿ.ಎಸ್. ಪಾಟೀಲರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿ.ಎಸ್. ಪಾಟೀಲ, ಎಚ್.ಕೆ. ಪಾಟೀಲರು ನಮ್ಮ ನಾಯಕರೆ ಆಗಿದ್ದಾರೆ. ಜಿಲ್ಲೆಗೆ 2 ಸ್ಥಾನವಿದ್ದಲ್ಲಿ, ಎಚ್.ಕೆ. ಪಾಟೀಲರು, ಜಿ.ಎಸ್. ಪಾಟೀಲ ಸಚಿವರಾದರೆ ನಮಗೆ ಮತ್ತಷ್ಟು ಸಂತಸವಾಗುವುದು ಎಂದರು.ಮುಖಂಡ ಅಬ್ದುಲಸಾಬ್ ಹೊಸಮನಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರಲ್ಲಿ ಸಚಿವರಾಗುವ ಎಲ್ಲ ಅರ್ಹತೆಗಳಿವೆ. ಅವರು ಅಧಿಕಾರಕ್ಕೆ ಆಸೆ ಪಡದೆ ಕೇವಲ ಜನರ ಶ್ರೇಯೋಭಿವೃದ್ಧಿಗೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಮಹಾನಾಯಕ ಎಂದರು.