ದಿ.ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗದಿಂದ ಪ್ರಥಮ ಪುಣ್ಯ ಸ್ಮರಣೆ । ರೋಗಿಗಳಿಗೆ ಹಣ್ಣು, ಅನಾಥಾಶ್ರಮಕ್ಕೆ ಅಕ್ಕಿ ವಿತರಣೆ
ಚಿಂತಕ ಎಚ್.ಟಿ.ರಾಜೇಂದ್ರ ಕುವೆಂಪು ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ತಾಪಂ ಮಾಜಿ ಅಧ್ಯಕ್ಷ ಹಾಗೂ ಎಚ್.ಟಿ.ರಾಜೇಂದ್ರ ಅವರ ಒಡನಾಡಿ ಡಿ.ಸಿ.ದಿವಾಕರ ತಿಳಿಸಿದರು.
ಸೋಮವಾರ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ದಿ.ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗ ಏರ್ಪಡಿಸಿದ್ದ ದಿ.ಎಚ್.ಟಿ. ರಾಜೇಂದ್ರ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಚ್.ಟಿ.ರಾಜೇಂದ್ರ ಅವರಿಗೂ ನನಗೂ 50 ವರ್ಷಗಳ ಒಡನಾಟ ಇತ್ತು. ರೈತ ಸಂಘ, ಡಿಸಿಎಂಸಿ ಶಾಲೆ, ಒಕ್ಕಲಿಗರ ಸಂಘ, ಮಡಬೂರು ದೇವಸ್ಥಾನದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಎಚ್.ಟಿ.ರಾಜೇಂದ್ರ ಜಾತ್ಯಾತೀತವಾದಿ. ಎಲ್ಲಾ ಧರ್ಮದ, ಜಾತಿಯವರು ಒಟ್ಟಾಗಿ ಬಾಳಬೇಕು ಎಂಬುದು ಅವರ ಆಶಯ ಎಂದರು.ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಮಾತನಾಡಿ ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗ ಯಾವುದೇ ಒಂದು ಪಕ್ಷಕ್ಕೆ ಸೀಮತವಾಗಿಲ್ಲ. ರಾಜೇಂದ್ರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕಳೆದ ವರ್ಷ ಇದೇ ದಿನ ಮೃತ ಪಟ್ಟಾಗ ಇಡೀ ಶೃಂಗೇರಿ ಕ್ಷೇತ್ರ ಬಂದ್ ಆಗಿತ್ತು. ರಾಜೇಂದ್ರ ದೊಡ್ಡ ಜ್ಞಾನದ ಬಂಡಾರ ಇದ್ದಂತೆ ಎಂದು ಬಣ್ಣಿಸಿದರು.
ಎಚ್.ಟಿ.ರಾಜೇಂದ್ರ ಅವರ ನಿಕಟವರ್ತಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ ನನಗೂ ರಾಜೇಂದ್ರ ಅವರಿಗೂ 50 ವರ್ಷಗಳ ಒಡನಾಟವಿತ್ತು. ಅವರು 70 ವರ್ಷಗಳ ಹೇಗೆ ಬದುಕಿದ್ದರು ಎಂಬುದು ಗಮನ ಸೆಳೆಯುತ್ತಿದೆ. ವೈಯ್ಯಕ್ತಿಕ ಬದುಕಿಗಿಂತ ಸಮಾಜ ಮುಖಿ ಕೆಲಕ್ಕೆ ಹೆಚ್ಚು ಸಮಯ ನೀಡುತ್ತಿದ್ದರು. ಕುವೆಂಪು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿ ದ್ದರು.ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಉತ್ತಮ ಕೃಷಿಕರಾಗಿ ಇತರ ಕೃಷಿಕರಿಗೆ ಮಾದರಿಯಾಗಿದ್ದರು ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಆರ್.ಸುಂದರೇಶ್ ಮಾತನಾಡಿ, ಎಚ್.ಟಿ. ರಾಜೇಂದ್ರ ಅವರ ಆತ್ಮ ಎಲ್ಲರ ಹೃದಯದಲ್ಲಿದೆ.ಅವರ ತತ್ವ,ಸಿದ್ದಾಂತ ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ,ಪಪಂ ಮಾಜಿ ಅಧ್ಯಕ್ಷ ಜುಬೇದ, ಕಣುವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಮಾತನಾಡಿದರು. ವರ್ಕಾಟೆ ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಅಭಿಮಾನಿ ಬಳಗದ ಕಾರ್ಯದರ್ಶಿ ಸುಬಾನ್ ಸ್ವಾಗತಿಸಿದರು. ಕಲಾವಿದ ಅಭಿನವ ಗಿರಿರಾಜ್ ರಾಜೇಂದ್ರ ಕುರಿತು ತಾವೇ ರಚಿಸಿದ ಹಾಡು ಹಾಡಿದರು.ಸೇವಿಯಾರ್ ವಂದಿಸಿದರು.