ಸದ್ದುಗದ್ದಲದ ಭರಾಟೆಯಿಂದ ನಿರಾಳತೆಗೆ ಜಾರಿದ ಹಂಪಿ

KannadaprabhaNewsNetwork |  
Published : Feb 17, 2026, 02:15 AM IST
ಹಂಪಿಉತ್ಸವದ ಬಳಿಕ ಕಂಡು ಬಂದ ತ್ಯಾಜ್ಯವನ್ನು ಪೌರಕಾರ್ಮಿಕರು ಸೋಮವಾರ ತೆರವುಗೊಳಿಸಿ, ಸ್ವಚ್ಛಗೊಳಿಸಿದರು.  | Kannada Prabha

ಸಾರಾಂಶ

ವಿಜಯನಗರ ಕಾಲದ ಗತ ವೈಭವ ಸೃಷ್ಟಿಸಿದ್ದ ಹಂಪಿ ಉತ್ಸವ ನಡೆದ ಜಾಗವೀಗ ಸಹಜ ಸ್ಥಿತಿಗೆ ಮರಳಿದೆ!

ಮಂಜುನಾಥ ಕೆ.ಎಂ.

ಹಂಪಿ: ಧ್ವನಿವರ್ಧಕಗಳ ಭರಾಟೆ, ವಿವಿಧ ಕ್ರೀಡೆಗಳು, ಸಂಗೀತ, ಸಾಂಸ್ಕೃತಿಕ, ಜಾನಪದ ಕಲಾ ಪ್ರದರ್ಶನಗಳಿಂದ ವಿಜಯನಗರ ಕಾಲದ ಗತ ವೈಭವ ಸೃಷ್ಟಿಸಿದ್ದ ಹಂಪಿ ಉತ್ಸವ ನಡೆದ ಜಾಗವೀಗ ಸಹಜ ಸ್ಥಿತಿಗೆ ಮರಳಿದೆ!

ಉತ್ಸವದ ಭರಾಟೆ ಮುಗಿಯುತ್ತಿದ್ದಂತೆಯೇ ಬೇರೆ ಊರುಗಳಿಂದ ಆಗಮಿಸಿದ್ದ ವ್ಯಾಪಾರಿಗಳು, ಸಾವಿರಾರು ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು, ಸಾಂಸ್ಕೃತಿಕ ಲೋಕ ಸೃಷ್ಟಿಸಲು ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಕಲಾವಿದರು ಭಾನುವಾರ ತಡರಾತ್ರಿಯಿಂದಲೇ ಊರುಗಳಿಗೆ ಮರಳಿದರೆ, ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದ ಜನರು ಬಿಸಾಡಿದ ಪ್ಲಾಸ್ಟಿಕ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಶೇಖರಣೆಗೊಂಡಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛಗೊಳಿಸುವ ಕೆಲಸದಲ್ಲಿ ಪೌರ ಕಾರ್ಮಿಕ ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದಲೇ ನಿರತರಾಗಿದ್ದರು.

ಫೆ. 13ರಿಂದ ಮೂರು ದಿನಗಳ ಕಾಲ ಜರುಗಿದ ಹಂಪಿ ಉತ್ಸವದ ಆರು ವೇದಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯರಿಗೆಂದೇ ಸಾಹಸ ಕ್ರೀಡೆಗಳು, ಬೈಕ್‌ ರ್ಯಾಲಿ, ಬೋಟಿಂಗ್, ಆಹಾರಮೇಳ, ಗಾಳಿಪಟ ಪ್ರದರ್ಶನ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರಗಳಲ್ಲಿ ರಾಜ್ಯದ ವಿವಿಧ ಕಲಾವಿದರು ಭಾಗವಹಿಸಿ ಮೆರಗು ನೀಡಿದರು. ರೈತರ ಹಾಗೂ ಕೃಷಿ ಪ್ರಿಯರಿಗಾಗಿ ಎತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಚಾರಸಂಕಿರಣ, ಯುವಗೋಷ್ಠಿಗಳು ಹಾಗೂ ಕವಿಗೋಷ್ಠಿಗಳಲ್ಲಿ ಕವಿಗಳು ಭಾಗವಹಿಸಿದ್ದರು. ಹಂಪಿಯ ಆನೆಲಾಯ ಮತ್ತು ಕುದುರೆಲಾಯ ಆವರಣದಲ್ಲಿ ಹಮ್ಮಿಕೊಂಡಿದ್ಧ ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಿತ್ಯ ಸಾವಿರಾರು ಜನರು ವೀಕ್ಷಿಸಿದರು. ನೃತ್ಯ, ಸಂಗೀತ, ನಾಟಕಗಳ ಮೂಲಕ ವಿಜಯನಗರದ ಸಾಂಸ್ಕೃತಿಕ ವೈಭವವನ್ನು ಕಲಾವಿದರು ಪುನರುಜ್ಜೀವನಗೊಳಿಸಿದ್ದರು.

ವಿರೂಪಾಕ್ಷ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶ ದೀಪಾಲಂಕಾರಗಳಿಂದ ಕಂಗೊಳಿಸಿದವು. ವಿಜಯ ವಿಠ್ಠಲ ದೇವಸ್ಥಾನ ಎದುರು ಸಂಗೀತದ ಸ್ವರಗಳು ಪ್ರತಿಧ್ವನಿಸಿದವು. ಇಡೀ ಹಂಪಿ ಒಂದು ಜೀವಂತ ರಂಗಮಂದಿರದಂತೆ ನಿರ್ಮಾಣಗೊಂಡಂತೆ ಕಂಡು ಬಂದಿತ್ತು. ಉತ್ಸವ ಅಂಗವಾಗಿ ಹೊಸಪೇಟೆಯಿಂದ ಹಂಪಿವರೆಗೆ ರಸ್ತೆ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಹಂಪಿಯ ಬೀದಿಗಳು, ಸ್ಮಾರಕಗಳು, ಗುಡ್ಡಗಳು ಬಣ್ಣದ ಬೆಳಕಿನಲ್ಲಿ ತೇಲಿದಂತೆ ಗೋಚರಿಸಿದವು.

ಉತ್ಸವ ಮುಗಿಯುತ್ತಿದ್ದಂತೆಯೇ ಸದ್ದುಗದ್ದಲ ಕಡಿಮೆಯಾಗಿ ಸ್ಮಾರಕಗಳ ನಗರಿ ಹಂಪಿ ಎಂದಿನ ಸಹಜ ಸ್ಥಿತಿಯತ್ತ ಮರಳಿತು. ಸೋಮವಾರ ಉತ್ಸವದ ಆರು ವೇದಿಕೆಗಳನ್ನು ತೆರವುಗೊಳಿಸಲಾಯಿತು. ಸದಾ ಮೌನದಲ್ಲಿಯೇ ಇದ್ದು ಆಳವಾದ ಚಿಂತನೆಗೆ ಆಹ್ವಾನ ನೀಡುವ ಹಂಪಿಯಲ್ಲಿ ಉತ್ಸವದ ಗದ್ದಲ ಗಡಿಮೆಯಾಗುತ್ತಿದ್ದಂತೆಯೇ ದೇಶ-ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ನಿರಾಳಗೊಂಡರು. ಉತ್ಸವದ ಕೃತಕ ಬೆಳಕಿನ ಅಲಂಕಾರಗಳು ಅಳಿದುಹೋಗಿ ಹಂಪಿ ಎಂದಿನಂತೆ ಮೌನ, ಗಂಭೀರ ಮತ್ತು ಧ್ಯಾನಸ್ಥ ಸ್ಥಿತಿಯತ್ತ ಮರಳಿತು. ಉತ್ಸವ ಮುಗಿದ ನಂತರ ಕಾಣುವ ಶಾಂತಿ, ಮೇಲ್ನೋಟಕ್ಕೆ ಖಾಲಿತನದಂತೆ ಭಾಸವಾದರೂ, ವಾಸ್ತವದಲ್ಲಿ ಅದು ಹಂಪಿಯ ಮೂಲ ಸ್ವಭಾವದ ಪುನರುದ್ಘಾಟನೆ ಎಂಬ ಮಾತು ನೆನಪಿಸಿತು.

ಖುರ್ಚಿ ಮುರಿದು ಹೋದರು

ಹಂಪಿ ಉತ್ಸವಕ್ಕೆ ಬಂದಿದ್ದ ಪ್ರೇಕ್ಷಕರು ತಮಗಿಷ್ಟದ ಕಲಾವಿದರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಖುರ್ಚಿಗಳ ಮೇಲೆ ಕುಣಿದು ಕುಪ್ಪಳಿಸಿದರು. ಕೆಲವು ಯುವಕರು ಕುಡಿದ ಅಮಲಿನಲ್ಲಿ ವಿನಾಕಾರಣ ಖುರ್ಚಿಗಳನ್ನು ಮುರಿದು ಹಾಕಿದರು. ಹೀಗಾಗಿ, ವೇದಿಕೆ ಬಳಿ ಹಾಕಲಾಗಿದ್ದ ನೂರಾರು ಖುರ್ಚಿಗಳು ಮುರಿದು ಹೋಗಿದ್ದ ದೃಶ್ಯಗಳು ಕಂಡು ಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಕ್ರಮ ಅನಿವಾರ್ಯ: ತಂಗಡಗಿ ಎಚ್ಚರಿಕೆ
ಸೇವಾಲಾಲರ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು-ಮಾಜಿ ಸಚಿವ ಬಿ.ಸಿ. ಪಾಟೀಲ