ಕೃಷ್ಣ ಲಮಾಣಿ
ವಿಜಯ ವಿಠಲ ದೇವಾಲಯಕ್ಕೆ ತೆರಳಲು ಗೆಜ್ಜಲ ಮಂಟಪದ ಬಳಿ ಪಾರ್ಕಿಂಗ್ ಮಾಡಲಾಗಿದೆ. ಬ್ಯಾಟರಿ ಚಾಲಿತ ವಾಹನಗಳನ್ನು ಏರಿ; ಕಲ್ಲಿನತೇರು ಸ್ಮಾರಕ, ಸಪ್ತಸ್ವರ ಮಂಟಪಗಳ ವೀಕ್ಷಣೆ ಮಾಡಬೇಕಿದೆ. ಆದರೆ, ಈ ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ಬಂದರೆ ಸಾಕು; ಮಳೆ ನೀರು ನಿಂತು ಕೆಸರುಮಯವಾಗುತ್ತಿದೆ. ಈ ಕೆಸರುಮಯವಾಗಿರುವ ಸ್ಥಳದಲ್ಲೇ ಅನಿವಾರ್ಯವಾಗಿ ವಾಹನಗಳನ್ನು ನಿಲುಗಡೆ ಮಾಡುವ ಸ್ಥಿತಿ ತಲೆದೋರಿದೆ.
ಇನ್ನು ಉಗ್ರ ನರಸಿಂಹ ಬಳಿಯೂ ಪಾರ್ಕಿಂಗ್ ಇದೆ. ಕಮಲ ಮಹಲ್ ಬಳಿಯೂ ಪುರಾತತ್ವ ಇಲಾಖೆ ಪಾರ್ಕಿಂಗ್ಗೆ ಜಾಗ ಗುರುತಿಸಿದೆ. ಈ ಸ್ಥಳವೂ ಕೆಸರುಮಯವಾಗುತ್ತಿದೆ. ಮಳೆ ನೀರಿನಲ್ಲೇ ವಾಹನಗಳನ್ನು ನಿಲುಗಡೆ ಮಾಡುವ ಸ್ಥಿತಿ ಇದೆ. ದೇಶ, ವಿದೇಶಿ ಪ್ರವಾಸಿಗರು ಈ ಪಾರ್ಕಿಂಗ್ ಸ್ಥಿತಿ ಕಂಡು ಮಮ್ಮಲ ಮರಗುವಂತಾಗಿದೆ.ಇನ್ನು ಮಹಾನವಮಿ ದಿಬ್ಬದ ಬಳಿಯೂ ಪಾರ್ಕಿಂಗ್ ವ್ಯವಸ್ಥೆ ಇದೆ. ಈ ನಾಲ್ಕು ಪಾರ್ಕಿಂಗ್ಗೆ ಒಂದೇ ಕಡೆ ಶುಲ್ಕ ವಿಧಿಸಬೇಕಿದೆ. ಆದರೆ, ಸರಿಯಾಗಿ ಸೂಚನಾ ಫಲಕಗಳನ್ನು ಅಳವಡಿಸದ್ದರಿಂದ; ಪ್ರವಾಸಿಗರು ನಾಲ್ಕು ಕಡೆಯೂ ಶುಲ್ಕ ಕೊಡುವಂತಾಗಿದೆ.
ಭಾರತೀಯ ಪುರಾತತ್ವ ಇಲಾಖೆ ಆಗಸ್ಟ್ ತಿಂಗಳಿನಲ್ಲಿ ಆನ್ಲೈನ್ನಲ್ಲಿ ಟೆಂಡರ್ ಕರೆದು, ಗುತ್ತಿಗೆದಾರರೋರ್ವರಿಗೆ ಪಾರ್ಕಿಂಗ್ ಟೆಂಡರ್ ನೀಡಿದೆ. ಈ ಟೆಂಡರ್ ₹10 ಲಕ್ಷಕ್ಕೂ ಅಧಿಕವಿದೆ ಎಂದು ಪುರಾತತ್ವ ಇಲಾಖೆ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.
ಸೈಕಲ್ಗೆ ₹5 ಶುಲ್ಕ?
ಇನ್ನು ವಿರೂಪಾಕ್ಷೇಶ್ವರ ದೇವಾಲಯದ ಪಾರ್ಕಿಂಗ್ ಸ್ಥಳದ ಟೆಂಡರ್ನ್ನು ಧಾರ್ಮಿಕ ದತ್ತಿ ಇಲಾಖೆ ಕರೆದಿದೆ. ಇಲ್ಲೂ ಭಾರೀ ಪ್ರಮಾಣದಲ್ಲಿ ವಾಹನಗಳು ಬರುತ್ತಿರುವುದರಿಂದ ವ್ಯವಸ್ಥಿತವಾಗಿ ಪಾರ್ಕ್ ಮಾಡಲಾಗುತ್ತಿಲ್ಲ. ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಟ್ರಾಫಿಕ್ ಜಾಮ್ ತಪ್ಪಿಸಲು ಹರಸಾಹಸ ಪಡುವಂತಾಗಿದೆ.
ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರಿಗೆ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಶುಲ್ಕ ಪಡೆಯಲಾಗುತ್ತಿದೆ. ಪಾರ್ಕಿಂಗ್ ಸ್ಥಳಗಳು ಕೆಸರುಮಯವಾಗಿದ್ದರೂ ಶುಲ್ಕ ಪಡೆಯುವುದನ್ನು ಮಾತ್ರ ನಿಲ್ಲಿಸಲಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎನ್ನುತ್ತಾರೆ ಪ್ರವಾಸಿಗ ರಾಮ್.