ಕನ್ನಡಪ್ರಭ ವಾರ್ತೆ ಹಾನಗಲ್ಲ
ಹಾನಗಲ್ಲಿನಲ್ಲಿ ಲಿಂ.ಕುಮಾರಶಿವಯೋಗಿಗಳವರ ೯೪ನೇ ಪುಣ್ಯ ಸ್ಮರಣೋತ್ಸವದ ಎರಡನೇ ದಿನದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಮತವನ್ನು ವಿಶ್ವಮತವನ್ನಾಗಿಸಿದ ಹಾನಗಲ್ಲ ಲಿಂ.ಕುಮಾರಶಿವಯೋಗಿಗಳು ಪವಾಡ ಸದೃಶ್ಯರು. ನಿಸ್ವಾರ್ಥದ ಸಂಕಲ್ಪ, ಸಮಾಜದ ಕಳಕಳಿ, ಅನ್ಯರ ಸುಖದಲ್ಲಿ ತನ್ನ ಸುಖ, ಸ್ವಾರ್ಥಮುಕ್ತ ಬದುಕನ್ನು ಕಲಿಸಿದವರು. ವೀರಶೈವ ಲಿಂಗಾಯತ ಒಂದೇ ಎಂಬುದನ್ನು ಹಾನಗಲ್ಲ ಕುಮಾರಶಿವಯೋಗಿಗಳೇ ಸಾದರ ಪಡಿಸಿದ್ದಾರೆ. ಈಗಲೂ ಭೇದ ಭಾವ ನಮ್ಮನ್ನು ಬಿಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ವೇ ಜನಾಃ ಸುಖಿನೋಭವಂತು ಎಂಬುದೆ ಎಲ್ಲ ಧರ್ಮ ಸಿದ್ಧಾಂತಗಳ ಆಶಯ ಅದನ್ನು ಅನುಸರಿಸುವುದು ಮಾನವ ಧರ್ಮ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಧರ್ಮ, ಜಾತಿಗಳನ್ನು ಒಗ್ಗೂಡಿಸಿದ ಅನುಭವ ಮಂಟಪದ ಸಾರ್ಥಕತೆ ಈಗ ಮತ್ತೆ ಪುನರುತ್ಥಾನಗೊಳ್ಳಬೇಕಾಗಿದೆ. ವಚನಗಳು ಬದುಕಿನ ಸತ್ಯ, ಸಾಕ್ಷಿಯ ಭಂಡಾರ. ಮಾನವ ಧರ್ಮದ ಕಲ್ಯಾಣಕ್ಕಾಗಿ ಎಲ್ಲ ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಧರ್ಮ ಕಾರ್ಯಗಳಲ್ಲಿ ಪಕ್ಷಗಳ ವಾಸನೆ ಬೇಡ. ಜಾತಿ, ಮತ, ಪಕ್ಷ ಪಂಗಡಗಳನ್ನು ದೂರವಿಟ್ಟು ಸಮಾಜದ ಉನ್ನತಿಗೆ ಒಟ್ಟಾಗಿ ಶ್ರಮಿಸೋಣ. ಇದರಲ್ಲಿ ಸಾರ್ಥಕತೆ ಇದೆ. ಕೂಡಿ ಮಾಡಿದರೆ ಅದೊಂದು ಶಕ್ತಿಯಾಗುತ್ತದೆ ಎಂದರು.ಹಾವೇರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಸಮಾಜವನ್ನು ಬೆಳಗಿದ ಜ್ಯೋತಿ. ಧರ್ಮ, ಸಂಸ್ಕಾರಗಳು ನಮ್ಮ ಮೊದಲ ಆದ್ಯತೆಯಾಗಬೇಕಾದಾಗ ಮಠ ಮಂದಿರಗಳ ಪಾತ್ರ ದೊಡ್ಡದಿದೆ ಎಂದರು.
ಅನುಷಾ ಹಿರೇಮಠ ಮಾತನಾಡಿದರು. ಹುಬ್ಬಳ್ಳಿಯ ಖ್ಯಾತ ನಿರೋ ಸರ್ಜನ್ ಡಾ. ಶಿವಯೋಗಿ ಬಳಿಗಾರ, ಹುಬ್ಬಳ್ಳಿಯ ಖ್ಯಾತ ಹೃದಯರೋಗ ತಜ್ಞ ಡಾ. ರಾಜಕುಮಾರ ಹಿರೇಮಠ, ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ, ಹುಬ್ಬಳ್ಳಿಯ ಖ್ಯಾತ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಬಾಣದ, ಐ.ಕೆ. ಧರಣಗೌಡರ ಅವರಿಗೆ ಶ್ರೀಮಠದಿಂದ ಶ್ರೀರಕ್ಷೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಾನಗಲ್ಲ ತಾಲೂಕಿನ ನಿವೃತ್ತ ಶಿಕ್ಷಕರು ಉಪನ್ಯಾಸಕರನ್ನು ಗೌರವಿಸಲಾಯಿತು.