ಗದಗ: ದೇಶದಲ್ಲಿಯೇ ಅಪರೂಪವೆನ್ನಬಹುದಾದ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅದನ್ನು ತುಂಬಾ ಕಷ್ಟಪಟ್ಟು ಅಭಿವೃದ್ಧಿಪಡಿಸಿ ಹರಿದು ಹಂಚಿ ಹೋಗಿದ್ದ ಸಮಾಜವನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಲಿಂ. ಹಾನಗಲ್ಲ ಕುಮಾರೇಶ್ವರ ಸ್ವಾಮಿಗಳು ನಾಡು ಕಂಡ ಅಪರೂಪದ ಶಿವಯೋಗಿ ಎಂದು ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಹೇಮಂತಗೌಡ ಪಾಟೀಲ ಶ್ಲಾಘಿಸಿದರು.ನಗರದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಅಡವಿಂದ್ರಸ್ವಾಮಿ ಮಠದ 344ನೇ ಮಾಸಿಕ ಶಿವಾನುಭವ ಹಾಗೂ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಹಾನಗಲ್ಲ ಕುಮಾರೇಶ್ವರರು ಎಂಬ ವಿಷಯ ಕುರಿತು ಮಾತನಾಡಿದರು.ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪೂರ್ವವಾದ ಸೇವೆ ಸಲ್ಲಿಸಿದಂತೆಯೇ, ಬಾಗಲಕೋಟೆಯಲ್ಲಿ ಜಿನ್ನಿಂಗ್ ಮಿಲ್ ಸ್ಥಾಪಿಸುವ ಮೂಲಕ ಉದ್ಯೋಗಿಕ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದರು ಎಂದರು. ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಲಿಂ. ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳು ತಮ್ಮ 37ನೇ ವಯಸ್ಸಿನಲ್ಲಿ ಸಾಮಾಜಿಕ ಸಾರ್ವಜನಿಕ ಸೇವೆಗೆ ಪದಾರ್ಪಣೆ ಮಾಡಿ ತಮ್ಮ 63ನೇ ವಯಸ್ಸಿನಲ್ಲಿಯೇ ಲಿಂಗೈಕ್ಯರಾದರೂ ನೂರಾರು ವರ್ಷಗಳ ಕಾಲ ಮಾಡಬಹುದಾದಷ್ಟು ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಈ ನಾಡಿನಲ್ಲಿ ಮಾಡಿದ್ದು ಒಂದು ದಾಖಲೆಯೇ ಸರಿ. ಪ್ರಾತಃಸ್ಮರಣೀಯರಾದ ಅವರನ್ನು ನಾಡಿನ ಲಿಂಗಾಯತ ವೀರಶೈವ ಮಠಗಳು, ಮಠಾಧೀಶರು ಮತ್ತು ಸಮಾಜ ವರ್ಗದವರು ನಿತ್ಯ ಸ್ಮರಿಸಿದರೂ ಸಾಲದು ಎಂದರು.ಸಮ್ಮುಖ ವಹಿಸಿದ್ದ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪರೂಪವಾಗಿದ್ದು, ಇಂದಿನ ಎಲ್ಲ ಮಠಾಧೀಶರಿಗೆ ಅವರ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ಬಸವರಾಜ ಪಲ್ಲೇದ, ಮಾರುತಿ ಹಾಗೂ ಪ್ರಸಾದ ಸೇವೆಯನ್ನು ವಹಿಸಿಕೊಂಡಿದ್ದ ಶ್ರೀನಿವಾಸ್ ಶಂಕರಸಾ ಪವಾರ ದಂಪತಿಗಳನ್ನು ಶ್ರೀಮಠದಿಂದ ಸತ್ಕರಿಸಲಾಯಿತು.