ಹೊಸಪೇಟೆ: ವಿದ್ಯಾರ್ಥಿಗಳಿಗೆ ಟಿವಿ, ಮೊಬೈಲ್ ಗೀಳಿನಿಂದ ತಪ್ಪಿಸಿ ಅವರನ್ನು ಸಾಹಿತ್ಯದ ಅಧ್ಯಯನದತ್ತ ಪ್ರೇರೇಪಿಸಬೇಕು. ಶಿಕ್ಷಕರು ನಿರಂತರ ಅಧ್ಯಯನಶೀಲರಾದಾಗ ಮಾತ್ರ ಬೋಧನೆ ಪರಿಣಾಮಕಾರಿಯಾಗಲಿದೆ ಎಂದು ಕೃಷ್ಣಕವಿ ರಂಗೋಪಂಥ ನಾಗರಾಜರಾಯರು ಅಭಿಪ್ರಾಯಪಟ್ಟರು.ಇಲ್ಲಿನ ರೋಟರಿ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಭಾಷಾ ಬೋಧನೆಯಲ್ಲಿ ಕಾವ್ಯ ಮತ್ತು ಕನ್ನಡ ಗೀತೆಗಳ ಪರಿಣಾಮಕಾರಿ ಅನುಷಾನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು, ಸೈನಿಕ ಹಾಗೂ ರೈತ ದೇಶದ ಆಧಾರ ಸ್ತಂಭಗಳು. ಅವರನ್ನು ಗೌರವಿಸುವ ದೇಶ ಯಾವತ್ತೂ ಹಿಂದುಳಿಯಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರ ತಮ್ಮ ಬೋಧನಾ ಕ್ರಮದಲ್ಲಿ ಹೊಸತನ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಬೋಧನೆಗೆ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಸಾಹಿತಿ ಬಿ.ಎಂ. ರಾಜಶೇಖರ್ ಮಾತನಾಡಿ, ಪಠ್ಯದಲ್ಲಿ ಬರುವ ಕಾವ್ಯಗಳನ್ನು ಗೀತೆ ರೂಪದಲ್ಲಿ ವಿವರಣೆ ನೀಡುವ ಮೂಲಕ ವಿಷಯವನ್ನು ಮಕ್ಕಳಿಗೆ ಮನಮುಟ್ಟುವಂತೆ ಮಾಡಲು ಸಾಧ್ಯ ಎಂದರು.ಖ್ಯಾತ ನಾಟಕಕಾರ ಮ. ಬ. ಸೋಮಣ್ಣ ಮಾತನಾಡಿ, ರಂಗಭೂಮಿಯ ಕಲಾವಿದನಾಗಿ ನಾನು 1500 ರಂಗ ಗೀತೆಗಳನ್ನು ರಚಿಸಿದ್ದು, ಅವುಗಳಲ್ಲಿ ಬಹುತೇಕ ಜನಪ್ರಿಯವಾಗಿವೆ. ಜನರಿಗೆ ಹತ್ತಿರವಾದ ವಿಷಯ ಮತ್ತು ನಿರೂಪಣಾ ಶೈಲಿಯೇ ಅದಕ್ಕೆ ಕಾರಣ. ಅದರಂತೆ ಪಠ್ಯದಲ್ಲಿರುವ ಕಾವ್ಯಗಳನ್ನು ಅಭಿನಯ ಗೀತೆಗಳಾಗಿ ರೂಪಾಂತರಿಸಿ ಹಾಡಿದಲ್ಲಿ ಮಕ್ಕಳನ್ನು ಆಕರ್ಷಿಸಲಿದೆ ಎಂದು ತಿಳಿಸಿದರು.
ವಿಷಯ ಪರಿವೀಕ್ಷಕ ಬಸವರಾಜ್ ಸಂಗಪ್ಪನವರ್ ಸಭೆಯಲ್ಲಿ ಮಾತನಾಡಿದರು. ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಲೋಕಪ್ಪ ಎಚ್., ಸಹ ಕಾರ್ಯದರ್ಶಿ ಸಿದ್ದಮ್ಮ, ರಮೀಜಾ ಬೀ, ಉಮೇಶ ಟಿ, ಲೋಕಣ್ಣ, ಬಸವಂತಪ್ಪ, ವಿ.ಬಿ. ಜಗದೀಶ್, ಸಿದ್ದಮ್ಮ, ಮಲ್ಲಯ್ಯ, ಕೊಟ್ರೇಶ್ ಇದ್ದರು.ಶೇಖರಯ್ಯ ಟಿಎಚ್ಎಂ ನಿರೂಪಿಸಿದರು. ಗುರುಬಸವರಾಜ್ ವಂದಿಸಿದರು.