ಹಳಿಯಾಳ, ಕಾರವಾರ ಜೈಲುಗಳ ಅವಲಂಬನೆ । ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚಳ
ಕನ್ನಡಪ್ರಭ ವಾರ್ತೆ ಶಿರಸಿ
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿರಸಿ ಉಪ ಕಾರಾಗೃಹ (ಸಬ್ಜೈಲ್) ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಆರೋಪಿತರನ್ನು ಹಳಿಯಾಳ ಹಾಗೂ ಕಾರವಾರ ಜೈಲುಗಳಿಗೆ ಕಳುಹಿಸುವುದು ಅನಿವಾರ್ಯವಾಗಿದ್ದರಿಂದ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಿದೆ.ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿ 2014ರಿಂದ ಉಪ ಕಾರಾಗೃಹ ಕಾರ್ಯಾರಂಭಗೊಂಡಿತ್ತು. ಕಳೆದ ಮೂರು ವರ್ಷದ ಹಿಂದೆ ವಿಚಾರಣಾಧೀನ ಇಲ್ಲಿನ ಕೈದಿಗಳನ್ನು ಕಾರವಾರ ಹಾಗೂ ಹಳಿಯಾಳದ ಬಂಧಿಖಾನೆಗೆ ಸ್ಥಳಾಂತರಿಸಿ, ಕಟ್ಟಡ ನೆಲಸಮಗೊಳಿಸಿ, ಇಲ್ಲಿನ ಜಾಗದಲ್ಲಿ ಸರ್ಕಾರಿ ವಿವಿಧ ಇಲಾಖೆಯ ಕಚೇರಿಗಳ ಸಮುಚ್ಛಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಹಳೆಯ ಕಾರಾಗೃಹದಲ್ಲಿ ಸುಮಾರು 40ಕ್ಕೂ ಹೆಚ್ಚು ಆರೋಪಿಗಳನ್ನು ಇಲ್ಲಿ ವಿಚಾರಣೆಗಾಗಿ ಇಡಲಾಗುತ್ತಿತ್ತು. ಇದರಿಂದ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿತರನ್ನು ಈ ಸಬ್ ಜೈಲಿಗೆ ವರ್ಗಾಯಿಸಲಾಗುತ್ತಿತ್ತು. ಆದರೆ ಈ ನಾಲ್ಕು ತಾಲೂಕಿನವರು ಕಳೆದ ಮೂರು ವರ್ಷಗಳಿಂದ ದೂರದ ಕಾರವಾರ ಕೇಂದ್ರ ಕಾರಾಗೃಹ ಹಾಗೂ ಹಳಿಯಾಳದ ಉಪ ಕಾರಾಗೃಹಕ್ಕೆ ಹೋಗಬೇಕಾಗಿದೆ.
ನ್ಯಾಯವಾದಿ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಯತ್ನದಿಂದ 2014ರಲ್ಲಿ ಹೈಕೋರ್ಟ್ ರಿಟ್ ಪಿಟಿಶನ್ ಆದೇಶದ ಮೇರೆಗೆ ಶಿರಸಿಯಲ್ಲಿ ಉಪ ಕಾರಾಗೃಹ ಪುನರಾರಂಭವಾಗಿತ್ತು. ಶಿರಸಿಯ ಚಿಪಗಿ ಸರ್ಕಲ್ ಬಳಿಯಲ್ಲಿರುವ ತರಬೇತಿ ಕೇಂದ್ರದ ಕಟ್ಟಡವನ್ನು ತಾತ್ಕಾಲಿಕ ಜೈಲಿಗೆ ಬಳಕೆಗೆ ಪ್ರಸ್ತಾವನೆ ಸಲ್ಲಿಸಿದರೂ ಅದು ತಿರಸ್ಕಾರಗೊಂಡಿರುವ ಕಾರಣ ಪೊಲೀಸರಿಗೆ ಇನ್ನಷ್ಟು ತಲೆನೋವಾಗಿದೆ. ಶಿರಸಿಯಲ್ಲಿ ಆದಷ್ಟು ಶೀಘ್ರವಾಗಿ ಉಪ ಕಾರಾಗೃಹ ಆರಂಭಕ್ಕೆ ಸರ್ಕಾರ ಇಚ್ಛಾಶಕ್ತಿ ವಹಿಸುವುದು ಅನಿವಾರ್ಯ ಎಂಬ ಆಗ್ರಹ ಕೇಳಿ ಬಂದಿದೆ.ಬಜೆಟ್ನಲ್ಲಿ ಘೋಷಣೆಯಾಗಲಿ