ಕಾರವಾರ:ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಜಾಗದ ಹಸ್ತಾಂತರ, ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮ ನಡೆಯಿತು.ಶಾಸಕ ಸತೀಶ ಸೈಲ್ ಮಾತನಾಡಿ, ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಸಿದ್ಧತೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಕ್ರೀಡಾಂಗಣ ಸಿದ್ಧಗೊಂಡರೆ ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತದೆ. ಜತೆಗೆ ಪ್ರವಾಸೋದ್ಯಮ ಕೂಡಾ ಬೆಳೆಯುತ್ತದೆ. ಕ್ರಿಕೆಟ್ ಅಸೋಸಿಯೇಷನ್ಗೆ ಸದಾಶಿವಗಡದಲ್ಲಿ ಇರುವ ಗೋಮಾಳ ಜಾಗ ೧೧.೩೪ ಎಕರೆ ನೀಡಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಜಾಗ ಪಡೆಯುವುದಿಲ್ಲ. ಆತಂಕಪಡುವ ಅವಶ್ಯಕತೆಯಿಲ್ಲ. ಅದು ಗೋಮಾಳ ಜಾಗವಾಗಿದ್ದರಿಂದ ಗೋ ಸರ್ವೇ ನಡೆಸಿಯೇ ಜಾಗವನ್ನು ಡಿನೋಟಿಫಿಕೇಶನ್ ಮಾಡಲಾಗಿದೆ ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಅಂಕೋಲಾ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಭೂ ಪರಿಹಾರ ಹೆಚ್ಚು ನೀಡಲು ಸ್ಥಳೀಯರು ಅಗ್ರಹಿಸಿದ್ದರು. ಹೆಚ್ಚುವರಿ ಪರಿಹಾರ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದೆ. ಈ ಹಿಂದೆ ನೌಕಾನೆಲೆ ನಿರ್ಮಾಣದ ವೇಳೆ ಸಂತ್ರಸ್ತರಾದ ಕೆಲವರು ಪುನಃ ಆಗುತ್ತಿದ್ದಾರೆ. ಅವರಿಗೆ ಹೆಚ್ಚಿನ ಭೂಮಿ ನೀಡಲು ಕೂಡಾ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ ಭಟ್ ಮಾತನಾಡಿ, ಈ ಜಿಲ್ಲೆಯಲ್ಲಿ ಕ್ರೀಡಾಂಗಣ ಇಲ್ಲದೇ ತೊಂದರೆ ಆಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಈ ಅಂತಾರಾಷ್ಟ್ರೀಯ ಕ್ರೀಡಾಂಗಣ ಕಾರವಾರದ ಯುವಕರಿಗೆ ಸಾಕಷ್ಟು ಸಹಕಾರಿ ಆಗಲಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಸಾಕಷ್ಟು ಪೂರ್ವಭಾವಿ ತಯಾರಿಗಳಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಯುವಕ-ಯುವತಿಯರಿಗಾಗಿ ಇಲ್ಲಿ ತರಬೇತಿ ಸಂಸ್ಥೆ ಕೂಡಾ ಸ್ಥಾಪಿಸಲಾಗುತ್ತಿದೆ. ಈ ಜಿಲ್ಲೆಯ ಯುವಜನಾಂಗ ಕ್ರೀಡೆಯಲ್ಲಿ ನಮ್ಮ ರಾಜ್ಯದ ಪ್ರತಿನಿಧಿಯಾಗಬೇಕು ಎನ್ನುವ ಆಸೆಯಿದೆ ಎಂದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಕ್ರಿಕೆಟ್ ಅಸೋಸಿಯೇಷನ್ನ ನಿಖಿಲ, ವಿನಯ ಮೊದಲಾದವರು ಇದ್ದರು.