ಕೊಪ್ಪಳ: ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಸಾವಯವ ದೃಢೀಕರಣ ಮಾಡಿದರೆ ಆ ಪದಾರ್ಥದ ಮೌಲ್ಯ ಇನ್ನಷ್ಟು ಅಧಿಕವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅಭಿಪ್ರಾಯಪಟ್ಟರು.ನಗರದ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ಸಾವಯವ ಕೃಷಿಕರಿಗೆ ಬುಧವಾರ ಏರ್ಪಡಿಸಿದ್ದ ಸಾವಯವ ದೃಢೀಕರಣ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.ರೈತರ ಆರ್ಥಿಕತೆ ಉತ್ತಮಗೊಳಿಸಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅದರಲ್ಲೂ ಸಾವಯವ ಕೃಷಿಕರು ನಿಸರ್ಗಸ್ನೇಹಿ ಪದ್ಧತಿ ಜತೆಗೆ ದೃಢೀಕರಣ ಯೋಜನೆಗೆ ಒಳಪಟ್ಟರೆ, ಅವರ ಆದಾಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದರು.ಸಹಜ ಸಮೃದ್ಧ ಸಾವಯವ ಉತ್ಪಾದಕರ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮೇಶ್ ಬಿ. ಮಾತನಾಡಿ, ಸಾವಯವ ಪ್ರಮಾಣೀಕರಣದ ಬಗ್ಗೆ ಹೆಚ್ಚು ರೈತರಲ್ಲಿ ಜಾಗೃತಿ ಇಲ್ಲ. ಕೃಷಿಕರಿಗೆ ಮಾಹಿತಿ ಕೊಡುವ ಜತೆಗೆ, ಅವರ ಜಮೀನನ್ನು ಸಾವಯವ ಪ್ರಕ್ರಿಯೆಗೆ ಒಳಪಡಿಸುವ ಉಸ್ತುವಾರಿಯನ್ನು ತಮ್ಮ ರೈತ ಉತ್ಪಾದಕ ಕಂಪನಿ ವಹಿಸಿಕೊಂಡಿದೆ ಎಂದರು.