ಹನೂರು ಶೂಟೌಟ್ ಪ್ರಕರಣ: ಘಟನಾ ಸ್ಥಳಕ್ಕೆ ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಭೇಟಿ

KannadaprabhaNewsNetwork |  
Published : Sep 11, 2026, 02:00 AM IST
ಸಿಐಡಿ | Kannada Prabha

ಸಾರಾಂಶ

ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಉಪವಿಭಾಗಾಧಿಕಾರಿ ತನಿಖೆ, ಪೊಲೀಸ್ ತನಿಖೆ ಮತ್ತು ಸಿಐಡಿ ತನಿಖಾ ವರದಿಗಳನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ. ತನಿಖೆ ಕೊನೆಯ ಘಟ್ಟ ತಲುಪಿರುವ ಹಂತದಲ್ಲಿ ಎಡಿಜಿಪಿ ಭೇಟಿ ನೀಡಿ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ- ಕರಿಕಲ್ಲುಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ಶೂಟೌಟ್ ನಡೆದ ಘಟನಾ ಸ್ಥಳಕ್ಕೆ ಸಿಐಡಿ ವಿಭಾಗದ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆ. 24 ರಂದು ಸರ್ಕಾರವು ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸಿಐಡಿ ಗೆ ಹಸ್ತಾಂತರಿಸಿದ ನಂತರ, ಸಿಐಡಿ ಎಸ್ ಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಇಬ್ಬರು ಡಿವೈಎಸ್ಪಿ ಗಳು ಸೇರಿ ಇನ್ಸ್‌ಪೆಕ್ಟರ್ ಹಾಗೂ ನಾಲ್ಕು ತಂಡಗಳು ಕಳೆದ 10 ದಿನಗಳಿಂದ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದವು.

ತನಿಖಾ ತಂಡವು ಶೂಟೌಟ್ ನಡೆದ ಸ್ಥಳ, ಮೃತಪಟ್ಟ ಮೂವರ ಮನೆಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆ ಹಾಕಿದ್ದು ಜೊತೆಗೆ ದುಷ್ಕರ್ಮಿಗಳಿಂದ ಅರಣ್ಯ ಇಲಾಖೆಗೆ ಸೇರಿದ ವಸತಿ ನಿಲಯಗಳು ಹಾಗೂ ಕಳ್ಳ ಬೇಟೆ ತಡೆ ಶಿಬಿರಗಳ ಧ್ವಂಸ ಪ್ರಕರಣ ಸಂಬಂಧಿಸಿದಂತೆ ಸಂಪೂರ್ಣ ವರದಿ ಹಾಗೂ ಶೂಟೌಟ್‌ನಲ್ಲಿ ಬದುಕುಳಿದ ಏಕೈಕ ಸಾಕ್ಷಿ ಮಹಿಮಾದಾಸ್ ಅವರಿಂದಲೂ ವಿಚಾರಣೆ ನಡೆಸಿತ್ತು.

ಸೆ. 10 ರ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರು ಹಲವು ತಂಡಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಈ ವೇಳೆ ಅವರು ಹೊಳೆಮುರಿದಟ್ಟಿ ಕಳ್ಳಬೇಟೆ ತಡೆ ಶಿಬಿರ, ಅರಣ್ಯ ಇಲಾಖೆಯ ವಸತಿ ನಿಲಯಗಳು ದುಷ್ಕರ್ಮಿಗಳಿಂದ ಜಿಲೆಟಿನ್ ಸ್ಫೋಟಕ ಬಳಸಿ ಧ್ವಂಸಗೊಂಡಿರುವ ಸ್ಥಳವನ್ನು ಪರಿಶೀಲಿಸಿದರು. ಪ್ರಮುಖ ಸಾಕ್ಷಿ ಮಹಿಮಾದಾಸ್ ಅವರನ್ನು ಸ್ಥಳಕ್ಕೆ ಕರೆಸಿ ಆ. 15 ರಂದು ನಡೆದ ಸಂಪೂರ್ಣ ಘಟನೆಯ ಬಗ್ಗೆ ಮರು-ಸೃಷ್ಟಿ ಮೂಲಕ ಸಂಪೂರ್ಣ ಮಾಹಿತಿ ಪಡೆದರು.

ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಉಪವಿಭಾಗಾಧಿಕಾರಿ ತನಿಖೆ, ಪೊಲೀಸ್ ತನಿಖೆ ಮತ್ತು ಸಿಐಡಿ ತನಿಖಾ ವರದಿಗಳನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ. ತನಿಖೆ ಕೊನೆಯ ಘಟ್ಟ ತಲುಪಿರುವ ಹಂತದಲ್ಲಿ ಎಡಿಜಿಪಿ ಭೇಟಿ ನೀಡಿ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಎಡಿಜಿಪಿ ಅವರು ಸೆ.10 ರಿಂದ 13 ರವರೆಗೆ 3 ದಿನಗಳ ಕಾಲ ಹನೂರಿನಲ್ಲೇ ವಾಸ್ತವ್ಯ ಹೂಡಿ, ಮೃತ ಕುಟುಂಬಗಳ ಹೇಳಿಕೆ ಹಾಗೂ ಹನೂರು ಮತ್ತು ರಾಮಪುರ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಸೇರಿದಂತೆ ವಾಸ್ತವ ವರದಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಿಐಡಿ ಎಸ್ ಪಿ ಉಮಾ ಪ್ರಶಾಂತ್ ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಹಾಗೂ ತನಿಖಾ ತಂಡ ಭೇಟಿ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕೈಯಲ್ಲಿ ಮೂಡಿ ಬಂದ ಮಣ್ಣಿನ ಗಣೇಶ
ಹನೂರಿನಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ: ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ